ಬೆಂಗಳೂರು: ಜಲಮಂಡಳಿಯು ನಗರದ ಮಲ್ಲೇಶ್ವರದ ಎಂಟನೇ ಮುಖ್ಯರಸ್ತೆಯಲ್ಲಿ ಪೈಪ್ಲೈನ್ ಅಳವಡಿಕೆ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಇನ್ನೊಂದೆಡೆ, ಕಳೆದ ಹತ್ತು ದಿನಗಳಿಂದ ಕಾವೇರಿ ನೀರು ಪೂರೈಕೆ ಆಗದೆ ಸ್ಥಳೀಯ ನಿವಾಸಿಗಳು ತೀವ್ರ ತೊಂದರೆಗೀಡಾಗಿದ್ದಾರೆ.
ಕೊಳವೆ ಬಾವಿ ವ್ಯವಸ್ಥೆ ಹೊಂದಿಲ್ಲದಿರುವವರು, ನೀರಿಗಾಗಿ ಖಾಸಗಿ ಟ್ಯಾಂಕರ್ಗಳ ಮೊರೆ ಹೋಗಿದ್ದಾರೆ. ಟ್ಯಾಂಕರ್ ಒಂದಕ್ಕೆ ₹750 ಪಾವತಿಸಿ ನೀರು ತರಿಸಿಕೊಳ್ಳುತ್ತಿದ್ದಾರೆ.
‘ವಾರಕ್ಕೂ ಹೆಚ್ಚು ದಿನಗಳಿಂದ ಕಾವೇರಿ ನೀರು ಪೂರೈಸುತ್ತಿಲ್ಲ. ಜಲಮಂಡಳಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದಿಸಿಲ್ಲ. ಹಣ ಕೊಟ್ಟು ಟ್ಯಾಂಕರ್ ನೀರು ತರಿಸಿಕೊಳ್ಳಬೇಕಾಗಿದೆ’ ಎಂದು ವಿಜಯಲಕ್ಷ್ಮಿ ಎಂಬುವರು ಅಳಲು ತೋಡಿಕೊಂಡರು.
ಮಲ್ಲೇಶ್ವರ 8ನೇ ಮುಖ್ಯರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿಯೂ ಕಾವೇರಿ ನೀರು ಪೂರೈಕೆಯಾಗದೆ ಸಮಸ್ಯೆ ಉಂಟಾಗಿದೆ. ಹೋಟೆಲ್ಗಳ ಮಾಲೀಕರು ಕೂಡ ಟ್ಯಾಂಕರ್ ನೀರಿಗೆ ಮೊರೆ ಹೋಗಿದ್ದಾರೆ.
‘ನೀರು ಪೂರೈಕೆ ಪೈಪ್ಲೈನ್ ಅಳವಡಿಕೆ ಕಾಮಗಾರಿ ನಡೆಯುತ್ತಿದೆ. ಪೈಪ್ ಒಂದರಲ್ಲಿ ನೀರು ಕಟ್ಟಿದ್ದರಿಂದ ಸಮಸ್ಯೆಯಾಗಿತ್ತು. ಈಗ ಸರಿಪಡಿಸಲಾಗಿದೆ. ಕಾವೇರಿ ನೀರು ಪೂರೈಸಲಾಗುತ್ತಿದೆ’ ಎಂದು ಜಲಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಪುರುಷೋತ್ತಮ ‘ಪ್ರಜಾವಾಣಿ’ಗೆ ತಿಳಿಸಿದರು.