ಬೆಂಗಳೂರು: ಬ್ಯಾಟರಾಯನಪುರ ಠಾಣಾ ವ್ಯಾಪ್ತಿಯ ಕಚೇರಿಯೊಂದರಲ್ಲಿ ಲ್ಯಾಪ್ಟಾಪ್, ಕಂಪ್ಯೂಟರ್, ಮೊಬೈಲ್ ಕದ್ದಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಸೂರ್ಯ, ರವಿಕುಮಾರ್ ಹಾಗೂ ಅಜಯ್ ಬಂಧಿತರು.
ಜ.19ರಂದು ಕಚೇರಿಯೊಂದಕ್ಕೆ ನುಗ್ಗಿದ್ದ ಆರೋಪಿಗಳು, ಅಲ್ಲಿದ್ದ ದುಬಾರಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಕಚೇರಿಯ ಮಾಲೀಕರು ಬ್ಯಾಟರಾಯನಪುರ ಠಾಣೆಗೆ ದೂರು ನೀಡಿದ್ದರು.
‘ಆರೋಪಿಗಳಿಂದ ಒಟ್ಟು ₹9.50 ಲಕ್ಷ ಮೌಲ್ಯದ ನಾಲ್ಕು ಐಫೋನ್, ಎರಡು ಲ್ಯಾಪ್ಟಾಪ್, ಒಂದು ಕಂಪ್ಯೂಟರ್, ಹಾರ್ಡ್ ಡಿಸ್ಕ್, ಪವರ್ ಬ್ಯಾಂಕ್ ಹಾಗೂ ಬೈಕ್ ವಶಕ್ಕೆ ಪಡೆಯಲಾಗಿದೆ. ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.