ಬೆಂಗಳೂರು:ಸಿ.ವಿ. ರಾಮನ್ ನಗರ ಕ್ಷೇತ್ರದಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿದ್ದು, ಇದಕ್ಕೆ ಶಾಸಕ ಎಸ್.ರಘು ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿರುವ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು, ಇದೇ 5ರಂದು ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.
‘ಶಾಸಕರು ಎಷ್ಟು ಅಪ್ರಯೋಜಕರು ಎಂಬುದಕ್ಕೆ ಅವರ ಮನೆಯ ಮುಂದೆಯೇ ಆರು ತಿಂಗಳಿಂದ ಗುಂಡಿ ಬಿದ್ದಿರುವ ರಸ್ತೆಗಳೇ ಸಾಕ್ಷಿ. ತಮ್ಮದೇ ಪಕ್ಷ ಅಧಿಕಾರದಲ್ಲಿದ್ದರೂ ಕ್ಷೇತ್ರಕ್ಕೆ ಏನೂ ಪ್ರಯೋಜನವಿಲ್ಲದಂತಾಗಿದೆ’ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ದೂರಿದ್ದಾರೆ.
‘ಕ್ಷೇತ್ರದಲ್ಲಿನ ಕೆಟ್ಟ ರಸ್ತೆಗಳು ಕ್ಷೇತ್ರದಾದ್ಯಂತ ಸಂಚಾರ ದಟ್ಟಣೆಯ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗಿವೆ. ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಶಾಸಕರಿಂದ ಯಾವ ಉಪಯುಕ್ತ ಕೆಲಸವೂ ಕ್ಷೇತ್ರದಲ್ಲಾಗಿಲ್ಲ’ ಎಂದು ಆರೋಪಿಸಿರುವ ಅವರು, ಶನಿವಾರ ಬೆಳಿಗ್ಗೆ 11ಕ್ಕೆಹೊಸ ತಿಪ್ಪಸಂದ್ರ ಮುಖ್ಯ ರಸ್ತೆಯಲ್ಲಿ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಲಾಗುತ್ತದೆ ಎಂದರು.