ಬೆಂಗಳೂರು: ಜೈಲಿನಿಂದಲೇ ರೌಡಿಗಳ ಗುಂಪು ಹೊರಗಿನ ವ್ಯಕ್ತಿಗಳಿಗೆ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಡುತ್ತಿದ್ದ ಸಂಗತಿ ಆಂತರಿಕ ವಿಚಾರಣೆಯಿಂದ ಬಯಲಿಗೆ ಬಂದಿದೆ.
ಪರಪ್ಪನ ಅಗ್ರಹಾರದ ಜೈಲಿನಲ್ಲಿರುವ ರೌಡಿಗಳ ಗುಂಪು ಮೊಬೈಲ್ ಬಳಸಿ ಹೊರಗೆ ಇರುವ ವ್ಯಕ್ತಿಗಳಿಗೆ ಜೀವ ಬೆದರಿಕೆ ಹಾಕುತ್ತಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಸೂಪರಿಂಟೆಂಡೆಂಟ್ ಶೇಷಮೂರ್ತಿ, ಬಂದಿಖಾನೆ ಡಿಜಿಪಿಗೆ ವರದಿ ಸಲ್ಲಿಸಿದ್ದರು.
ಜೈಲಿನಲ್ಲಿರುವ ಕೈದಿಗಳಾದ ವಾಸು ಸಜ್ಜು, ಧೀರಜ್, ಲೋಕೇಶ್, ಅಶೋಕ ಹಾಗೂ ವಿಚಾರಣಾಧೀನ ಕೈದಿ ಅಯ್ಯಪ್ಪ ಜೈಲಿನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಇಟ್ಟುಕೊಂಡು ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೆ ಎಂದು ಶೇಷಮೂರ್ತಿ ವರದಿಯಲ್ಲಿ ತಿಳಿಸಿದ್ದರು.
ಡಿಜಿಪಿ ಸೂಚನೆಯಂತೆ ರೌಡಿಗಳ ವಿರುದ್ಧ ದೂರು ನೀಡಲಾಗಿದೆ. ಅದರಂತೆ, ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರೌಡಿಗಳು ಮೃದು ಸ್ವಭಾವದ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದರು.ಅವರಿಂದ ಮಸಾಜ್ ಮಾಡಿಸಿಕೊಳ್ಳುತ್ತಿದ್ದರು. ಶೌಚಾಲಯ ಸ್ವಚ್ಛತೆಯಂಥ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿ ದ್ದರು. ಇತ್ತೀಚೆಗೆ ಜೈಲು ಸೇರಿದ್ದ ಟೆಕ್ಕಿಯೊಬ್ಬರ ಕುಟುಂಬಸ್ಥರಿಂದ ಈ ತಂಡ ತಮ್ಮ ಆಪ್ತರ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿತ್ತು ಎಂದು ಮೂಲಗಳು ಹೇಳಿವೆ. ಈ ಕುರಿತು ‘ಪ್ರಜಾವಾಣಿ’ ಕಳೆದ ವಾರ ವರದಿ ಪ್ರಕಟಿಸಿತ್ತು.