ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿ ಲಂಚ ಪಡೆಯುತ್ತಿದ್ದ ಆರೋಪದಡಿ ಮೈಸೂರು ರೈಲ್ವೆ ವಿಭಾಗದ ಹಿರಿಯ ವಿಭಾಗೀಯ ಅಧಿಕಾರಿ ಎಲ್.ಕೆ. ಶ್ರೀಕಾಂತ್ ಎಂಬುವರನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
‘ಕೆಲಸ ಕೊಡಿಸಲು ₹ 1 ಲಕ್ಷಕ್ಕೆ ಆರೋಪಿ ಬೇಡಿಕೆ ಇಟ್ಟಿದ್ದರು. ₹ 25 ಸಾವಿರ ಮುಂಗಡವಾಗಿ ತೆಗೆದುಕೊಳ್ಳುವ ವೇಳೆಯಲ್ಲಿ ದಾಳಿ ಮಾಡಿ ಬಂಧಿಸಲಾಗಿದೆ’ ಎಂದು ಸಿಬಿಐ ಅಧಿಕಾರಿಯೊಬ್ಬರು ಹೇಳಿದರು.
‘ಬೆಂಗಳೂರಿನ ನಿವಾಸಿಯೊಬ್ಬರು ರೈಲ್ವೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಲು ಪ್ರಯತ್ನಿಸುತ್ತಿದ್ದರು. ಅವರಿಗೆ ಸಂಬಂಧಿಕರ ಮೂಲಕ ಶ್ರೀಕಾಂತ್ ಪರಿಚಯವಾಗಿತ್ತು. ಕೆಲಸ ಕೊಡಿಸಬೇಕಾದರೆ ಲಂಚ ನೀಡಬೇಕೆಂದು ಅಧಿಕಾರಿ ಬೇಡಿಕೆ ಇಟ್ಟಿದ್ದರು. ಆ ಬಗ್ಗೆ ಅಭ್ಯರ್ಥಿಯೇ ದೂರು ನೀಡಿದ್ದರು’
‘ಮೈಸೂರಿನಲ್ಲಿರುವ ರೈಲ್ವೆ ಇಲಾಖೆ ಕಚೇರಿಯಲ್ಲೇ ಕಾರ್ಯಾಚರಣೆ ನಡೆಸಿ ಬಂಧಿಸಲಾಗಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದೂ ಅವರು ತಿಳಿಸಿದರು.