ವಿಶ್ವವಿದ್ಯಾಲಯಗಳು ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ ಅದನ್ನು ಸರ್ಕಾರದ ಗಮನಕ್ಕೆ ತಂದು, ಚರ್ಚಿಸಿ ಪರಿಹಾರಕ್ಕೆ ಯತ್ನಿಸಬೇಕು ಎಂದು ಸಹ ತಿಳಿಸಲಾಗಿದೆ. ಸರ್ಕಾರದ ಈ ಸುತ್ತೋಲೆಯಿಂದ ಹಲವು ಕುಲಪತಿಗಳು ಕೆಂಡಾಮಂಡಲರಾಗಿದ್ದಾರೆ. ‘ಹಣಕಾಸು ಅಥವಾ ಆಡಳಿತಾತ್ಮಕ ವಿಚಾರಗಳಲ್ಲಿ ಅವ್ಯವಹಾರಗಳು ನಡೆದರೆ ಸರ್ಕಾರ ಮಧ್ಯಪ್ರವೇಶಿಸಬಹುದು. ಆದರೆ ಇಂತಹ ಸುತ್ತೋಲೆ ಹೊರಡಿಸುವ ಮೂಲಕ ಸರ್ಕಾರ ಕುಲಪತಿಗಳನ್ನು ನೇರವಾಗಿ ನಿಯಂತ್ರಿಸಲು ಹೊರಟಿದೆ’ ಎಂದು ಸರ್ಕಾರಿ ವಿಶ್ವವಿದ್ಯಾಲಯದ ಕುಲಪತಿಯೊಬ್ಬರು ತಿಳಿಸಿದರು.