ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ್‍ಯಾಲಿ, ಸಮಾವೇಶ ಅನುಮತಿಗೆ ‘ಸುವಿಧಾ’ ತಂತ್ರಾಂಶ

ತರಬೇತಿ ಕಾರ್ಯಕ್ರಮ: ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿಕೆ
Last Updated 17 ಏಪ್ರಿಲ್ 2018, 8:48 IST
ಅಕ್ಷರ ಗಾತ್ರ

ಕಲಬುರ್ಗಿ: ‘ಚುನಾವಣೆ ಪ್ರಚಾರಕ್ಕಾಗಿ ವಾಹನ ಬಳಕೆ, ರ್‍ಯಾಲಿ, ಬಹಿರಂಗ ಸಮಾವೇಶ ಸೇರಿ ಇತರೆ ಪ್ರಚಾರ ಸಾಮಗ್ರಿ ಬಳಸಲು ‘ಸುವಿಧಾ’ ತಂತ್ರಾಂಶದ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬಹುದಾಗಿದೆ’ ಎಂದು ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶಕುಮಾರ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರಾಜಕೀಯ ಪಕ್ಷಗಳಿಗೆ ಮತ ಯಂತ್ರ (ಇವಿಎಂ), ಮತ ಖಾತರಿ ಯಂತ್ರ (ವಿವಿಪ್ಯಾಟ್) ಹಾಗೂ ‘ಸುವಿಧಾ’ ಮತ್ತು ‘ಸಮಾಧಾನ’ ಆನ್‌ಲೈನ್‌ ಸೇವೆಗಳ ಅರ್ಜಿ ಸಲ್ಲಿಕೆ ಕುರಿತು ಅರಿವು ಮೂಡಿಸಲು ಸೋಮವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಜ್ಯ ಚುನಾವಣಾ ಮುಖ್ಯ ಚುನಾವಣಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ‘ಸುವಿಧಾ’ ಲಿಂಕ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ 48 ಗಂಟೆಯೊಳಗೆ ಅನುಮತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆ ನಂತರ ಮೊಬೈಲ್‌ಗೆ ಸ್ವೀಕೃತಿ ಸಂಖ್ಯೆ ಬರುತ್ತದೆ. ಈ ಸಂಖ್ಯೆಯಿಂದ ಅರ್ಜಿಯ ಸ್ಥಿತಿಗತಿಯನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಬಹುದು. ಅಲ್ಲದೆ ಅನುಮತಿ ಪತ್ರವನ್ನು ಸಹ ಆನ್‌ಲೈನ್‌ ಮೂಲಕವೇ ಪಡೆದುಕೊಳ್ಳಬಹುದು. ಒಂದು ವೇಳೆ ರಾಜಕೀಯ ಪಕ್ಷಗಳು ನೇರವಾಗಿ ಕಚೇರಿಗೆ ಬಂದು ಅರ್ಜಿ ಸಲ್ಲಿಸಿದಲ್ಲಿ ಅದನ್ನು ಸಹ ಸ್ವೀಕರಿಸಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

‘ಸಾರ್ವಜನಿಕರು, ರಾಜಕೀಯ ಪಕ್ಷಗಳು ಚುನಾವಣೆಗೆ ಸಂಬಂಧಿಸಿದಂತೆ ದೂರು, ಮಾಹಿತಿ ಮತ್ತು ಸಲಹೆ ನೀಡಲು ‘ಸಮಾಧಾನ’ ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದೆ. ಸಾರ್ವಜನಿಕರು ಆನ್‌ಲೈನ್‌ ಮೂಲಕ ದೂರು ಸಲ್ಲಿಸಿ, ಅಗತ್ಯ ದಾಖಲಾತಿಗಳನ್ನು ಅಪ್‌ಲೋಡ್ ಮಾಡಬೇಕು. ಅರ್ಜಿ ಸ್ವೀಕರಿಸಿದ 24 ಗಂಟೆಯೊಳಗೆ ಸಮಸ್ಯೆಯನ್ನು ಬಗೆಹರಿಸಲಾಗುವುದು’ ಎಂದರು.

ಇವಿಎಂ ಮತ್ತು ವಿವಿಪ್ಯಾಟ್ ಕುರಿತು ಡಾ.ಶಶಿಶೇಖರ ರೆಡ್ಡಿ ಹಾಗೂ ಆನ್‌ಲೈನ್‌ ಅರ್ಜಿ ಸಲ್ಲಿಕೆ ಕುರಿತು ಮಹಾಂತೇಶಕುಮಾರ ತರಬೇತಿ ನೀಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಚುನಾವಣಾ ತಹಶೀಲ್ದಾರ್ ಪ್ರಕಾಶ ಚಿಂಚೋಳಿಕರ ಇದ್ದರು.

ಮದುವೆಗೆ ಅನುಮತಿ ಬೇಕಿಲ್ಲ

ಮದುವೆ ಕಾರ್ಯಕ್ರಮಕ್ಕೆ ಅನುಮತಿ ಪಡೆಯುವ ಅವಶ್ಯಕತೆ ಇಲ್ಲವಾದರೂ ಮದುವೆ ಮನೆಯವರು ನೋಂದಣಾಧಿಕಾರಿಗೆ ಮಾಹಿತಿ ನೀಡಬೇಕು. ಅಲ್ಲಿ ರಾಜಕೀಯ ನಾಯಕರು ಪ್ರಚಾರ ಮಾಡುವಂತಿಲ್ಲ.ರಾಜಕೀಯ ಪಕ್ಷಗಳು ನಡೆಸುವ ಬಹಿರಂಗ ಸಭೆ, ಸಮಾವೇಶದಲ್ಲಿ ಮತದಾರರಿಗೆ ಊಟ, ತಿಂಡಿ ನೀಡುವಂತಿಲ್ಲ. ಆದರೆ ಚಹಾ, ನೀರು ಕೊಡಬಹುದಾಗಿದ್ದು, ಇದರ ವೆಚ್ಚವನ್ನುಲೆಕ್ಕಕ್ಕೆ ತೆಗೆದುಕೊಳ್ಳಲಾಗುತ್ತದೆ.

108 ಪ್ರಕರಣ ದಾಖಲು

‘ನೀತಿ ಸಂಹಿತೆ ಜಾರಿಯಿಂದ ಇಲ್ಲಿಯವರೆಗೆ ಅಕ್ರಮ ಮದ್ಯ ಸಾಗಣೆಯಲ್ಲಿ ಭಾಗಿಯಾದವರ ಮೇಲೆ 108 ಪ್ರಕರಣಗಳು ದಾಖಲಾಗಿವೆ. ₹5 ಲಕ್ಷ ಮೊತ್ತದ 2 ಲಕ್ಷ ಲೀಟರ್ ಅಕ್ರಮ ಮದ್ಯ ಹಾಗೂ 28 ವಿವಿಧ ಮಾದರಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

70 ಅತೀ ಸೂಕ್ಷ್ಮ ಮತಗಟ್ಟೆ

ಕಳೆದ ಚುನಾವಣೆಯಲ್ಲಿ ಧಾರ್ಮಿಕ ವೈಷಮ್ಯ ಮತ್ತು ವಿವಿಧ ಕಾರಣಗಳಿಂದ ಗಲಭೆಗಳಿಗೆ ಸಾಕ್ಷಿಯಾದಂತಹ ಹಾಗೂ ಮತದಾರರಿಗೆ ಮತದಾನ ಮಾಡಲು ತಡೆಯೊಡ್ಡಿರುವಂತಹ 70 ಮತಗಟ್ಟೆಗಳನ್ನು ಅತೀ ಸೂಕ್ಷ್ಮ ಮತಗಟ್ಟೆಗಳು ಎಂದು ಪರಿಗಣಿಸಲಾಗಿದೆ. ಅಲ್ಲದೆ ಶೇ 90ರಷ್ಟು ಮತದಾನ ಹಾಗೂ ಒಂದೇ ಅಭ್ಯರ್ಥಿಗೆ ಶೇ 75ರಷ್ಟು ಮತಗಳು ಚಲಾವಣೆಯಾದಂತಹ ಕ್ಲಿಷ್ಟಕರ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇಂತಹ ಮತಗಟ್ಟೆ ಹಾಗೂ ಚೆಕ್ ಪೋಸ್ಟ್‌ಗಳಲ್ಲಿ ಅರೆ ಸೇನಾ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT