ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಗಾರಿಕೆಗಳ ಸಮಸ್ಯೆಗಳಿಗೆ ಶೀಘ್ರ ಸ್ಪಂದನೆ: ಮುಖ್ಯ ಕಾರ್ಯದರ್ಶಿ ಭರವಸೆ

Last Updated 2 ಜೂನ್ 2021, 12:18 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋವಿಡ್‌ ಎರಡನೇ ಅಲೆ, ಲಾಕ್‌ಡೌನ್‌ ಕಾರಣದಿಂದ ಕೈಗಾರಿಕಾ ವಲಯ ಎದುರಿಸುತ್ತಿರುವ ಸಮಸ್ಯೆಗಳಿಗೆ ಸ್ಪಂದಿಸುವ ಕುರಿತು ರಾಜ್ಯ ಸರ್ಕಾರ ಶೀಘ್ರ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ತಿಳಿಸಿದರು.

ಉದ್ಯಮಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಲಾಕ್‌ಡೌನ್‌ ನಂತರದ ಆರ್ಥಿಕ ಪುನಶ್ಚೇತನಕ್ಕೆ ಕೈಗೊಳ್ಳಬಹುದಾದ ಪರಿಹಾರ ಕ್ರಮಗಳ ಬಗ್ಗೆ ಉದ್ಯಮ ವಲಯದ ಜೊತೆ ಬುಧವಾರ ಅವರು ವರ್ಚುವಲ್ ಸಭೆ ನಡೆಸಿದರು.

‘ಕೋವಿಡ್ ಸಂದರ್ಭದಲ್ಲಿ ಉದ್ಯಮಗಳು ಎದುರಿಸುತ್ತಿರುವ ಸಂಕಷ್ಟಗಳ ಕುರಿತು ಕೈಗಾರಿಕೋದ್ಯಮಿಗಳು ಹಾಗೂ ವಿವಿಧ ವಾಣಿಜ್ಯ ಸಂಘಗಳ ಪದಾಧಿಕಾರಿಗಳು ನೀಡಿದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಉದ್ಯಮಿಗಳು ಮುಂದಿಟ್ಟ ಬೇಡಿಕೆಗಳು ಸಮಂಜಸವಾಗಿದ್ದು. ಎಲ್ಲವೂ ಆರ್ಥಿಕ ನೆರವು ಬೇಡುತ್ತಿಲ್ಲ. ಉದ್ಯಮಿಗಳ ಮನವಿಯನ್ನು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದರು.

‘ಮೇ ತಿಂಗಳಲ್ಲಿ ಸೋಂಕಿನ ತೀವ್ರತೆ ಹೆಚ್ಚಿತ್ತು. ಕೋವಿಡ್‌ಎರಡನೇ ಅಲೆಯ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಅನುಷ್ಠಾನಗೊಳಿಸಲಾಗಿತ್ತು. ಇನ್ನು ಹಂತ ಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸಿ, ಕೈಗಾರಿಕೆಗಳ ಕಾರ್ಯಚರಣೆಗೆ ಅನುವು ಮಾಡಿಕೊಡಬಹುದು. ಆರ್ಥಿಕತೆಯ ಪುನಾರಂಭಿಸಲು ಸಮಯ ಬಂದಿದೆ’ ಎಂದು ತಿಳಿಸಿದರು.

ಸಣ್ಣ, ಅತಿಸಣ್ಣ ಮಧ್ಯಮ ಕೈಗಾರಿಕೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರನ್ನು ಫ್ರಂಟ್‌ಲೈನ್‌ ಕಾರ್ಯಕರ್ತರೆಂದು ಪರಿಗಣಿಸಿ ಲಸಿಕೆ ನೀಡಬೇಕು, ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಸದ್ಯ ಕಾರ್ಯನಿರ್ವಹಿಸುತ್ತಿಲ್ಲವಾದ ಕಾರಣ ಮಾಸಿಕ ಪರವಾನಗಿ ಶುಲ್ಕ (₹ 75 ಸಾವಿರ) ಪಾವತಿಗೆ ವಿನಾಯಿತಿ ನೀಡಬೇಕು. ಬೆಸ್ಕಾಂ ಶುಲ್ಕ, ಕನಿಷ್ಠ ವಿದ್ಯುತ್‌ ಶುಲ್ಕ ಪಾವತಿಗೆ ವಿನಾಯಿತಿ, ಗುಜರಾತ್‌, ಮಾಹಾರಾಷ್ಟ್ರ ಹಾಗೂ ತಮಿಳುನಾಡಿನಲ್ಲಿರುವ ಪ್ರಮುಖ ಉದ್ಯಮಗಳಿಗೆ ಅಗತ್ಯ ಉತ್ಪನ್ನಗಳ ಪೂರೈಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಪೂರೈಕೆ ಸರಪಳಿಗೆ ತೊಂದರೆ ಆಗದಂತೆ ಉದ್ಯಮಗಳು ಪುನಾರಂಭಕ್ಕೆ ಸಹಕರಿಸಬೇಕು. ನಗರ ಪ್ರದೇಶಗಳಲ್ಲಿ ನರೇಗಾ ಯೋಜನೆ ಜಾರಿ ಮಾಡಬೇಕು, ಉದ್ಯೋಗ ಸೃಷ್ಟಿಗೆ ಪೂರಕ ವಾತಾವರಣ ಕಲ್ಪಿಸಬೇಕು’ ಎಂದು ಕೈಗಾರಿಕೋದ್ಯಮಿಗಳು ಮನವಿ ಮಾಡಿದರು.

ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜ್‌ಕುಮಾರ್‌ ಖತ್ರಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣಾ, ಮುಖ್ಯಮಂತ್ರಿಗಳ ಕಾರ್ಯನೀತಿ ಸಲಹೆಗಾರ ಪ್ರಶಾಂತ್‌ ಪ್ರಕಾಶ್‌, ಉದ್ಯಮಿ, ಟಿ.ವಿ.ಮೋಹನ್ ‌ದಾಸ್‌ ಪೈ, ಫಿಕ್ಕಿ ಅಧ್ಯಕ್ಷ ಉಲ್ಲಾಸ್‌ ಕಾಮತ್‌, ಎಫ್‌ಕೆಸಿಸಿಐ ಅಧ್ಯಕ್ಷ ಪೆರಿಕಲ್‌.ಎಂ. ಸುಂದರ್‌, ಉಪಾಧ್ಯಕ್ಷ ಐ.ಎಸ್. ಪ್ರಸಾದ್, ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ, ಆಟೋಮೊಬೈಲ್‌ ಅಸೋಸಿಯೇಷನ್‌ ಅಧ್ಯಕ್ಷ ಎಂಪಿ ಶ್ಯಾಮ್‌, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ. ಸಿ. ರಾವ್, , ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಪ್ರಕಾಶ್‌, ಐಟಿ ವಲಯದ ಪ್ರತಿನಿಧಿ ಪ್ರಹ್ಲಾದ್‌, ಅಸೋಚಾಮ್‌ನ ಬಿ.ವಿ. ನಾಯ್ಡು, ಪ್ರವಾಸೋದ್ಯಮ ವಲಯದ ಪ್ರತಿನಿಧಿ ಶ್ಯಾಮರಾಜು, ಜವಳಿ ಉದ್ದಿಮೆ ವಲಯದ ಅಧ್ಯಕ್ಷ ಆನಂದ್‌, ರಿಯಲ್‌ಎಸ್ಟೇಟ್‌ ಉದ್ಯಮ ಸಂಘದ ಗೋವಿಂದರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT