ಬೆಂಗಳೂರು: ಹತ್ತು ಆಸ್ಪತ್ರೆಗಳಿಗೆ ಅಲೆದರೂ ಸೂಕ್ತ ಚಿಕಿತ್ಸೆ ಸಿಗದೇ ತಮ್ಮ ಒಂದು ತಿಂಗಳ ಮಗು ಮೃತಪಟ್ಟಿದ್ದರಿಂದ ನೊಂದಿರುವ ತಂದೆ ವೆಂಕಟೇಶ್ ನಾಯ್ಡು ಎಂಬುವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನೆ ಎದುರು ಶನಿವಾರ ಪ್ರತಿಭಟನೆ ನಡೆಸಿದರು.
ಮೃತ ಮಗುವಿನ ಫೋಟೊ ಹಿಡಿದುಕೊಂಡು ಸಿ.ಎಂ. ಅವರ ಧವಳಗಿರಿ ನಿವಾಸದ ಎದುರು ನಿಂತಿದ್ದ ವೆಂಕಟೇಶ್, ‘ನನ್ನ ಮಗುವಿಗೆ ಬಂದ ಸ್ಥಿತಿ ಯಾರಿಗೂ ಬರಬಾರದು. ಮುಂದಿನ ದಿನಗಳಲ್ಲಿ ಪ್ರತಿಯೊಂದು ಮಗುವಿಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು’ ಎಂದು ಒತ್ತಾಯಿಸಿದರು.
‘ನನ್ನ ಮಗುವಿಗೆ ಚಿಕಿತ್ಸೆ ನೀಡಲು ನಿರಾಕರಿಸಿದ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮತ್ತಷ್ಟು ಜೀವಗಳು ಬಲಿಯಾಗುತ್ತವೆ’ ಎಂದು ಹೇಳಿದರು.
ಬಳಿಕ ಗೃಹ ಕಚೇರಿ ’ಕೃಷ್ಣಾ‘ ಬಳಿ ಬಂದ ವೆಂಕಟೇಶ್ ಅಲ್ಲೂ ಪ್ರತಿಭಟನೆ ಮುಂದುವರಿಸಿದರು. ಸ್ಥಳದಲ್ಲಿದ್ದ ಪೊಲೀಸರು, ವೆಂಕಟೇಶ್ ಅವರನ್ನು ವಶಕ್ಕೆ ಪಡೆದು ಹೊಯ್ಸಳ ವಾಹನದಲ್ಲಿ ಸ್ಥಳದಿಂದ ಕರೆದೊಯ್ದರು.