ಬೆಂಗಳೂರು: ಈ ಕಚೇರಿ ಆವರಣದಲ್ಲಿ ನಿತ್ಯವೂ ಖಾಕಿಗಳು ಹಾಗೂ ನೊಂದ ಸಾರ್ವಜನಿಕರ ಓಡಾಟ ಸಾಮಾನ್ಯ. ಗುರುವಾರ ಮಾತ್ರ ಆವರಣದಲ್ಲಿ ಮಕ್ಕಳ ದಂಡೇ ನೆರೆದಿತ್ತು. ಅತ್ತಿತ್ತ ಓಡಾಡುತ್ತಿದ್ದ ಮಕ್ಕಳು ಹಬ್ಬದ ವಾತಾವರಣವನ್ನೇ ಸೃಷ್ಟಿಸಿದ್ದರು. ನಟ ಯಶ್ ಸಹ ಮಕ್ಕಳ ಜೊತೆ ಬೆರೆತು ಬಾಲ್ಯದ ದಿನಗಳನ್ನು ನೆನೆದರು.
ನಗರದ ಇನ್ಫೆಂಟ್ರಿ ರಸ್ತೆಯಲ್ಲಿರುವ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರ ಕಚೇರಿಯಲ್ಲಿ ಕಂಡ ದೃಶ್ಯಗಳಿವು. ಮಕ್ಕಳ ದಿನಾಚರಣೆ ಅಂಗವಾಗಿ ಕಮಿಷನರೇಟ್ ವತಿಯಿಂದ ‘ಮಕ್ಕಳ ಜಾತ್ರೆ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಹಲವು ಶಾಲೆಗಳ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಮಕ್ಕಳ ವಿದ್ಯಾಭ್ಯಾಸ, ರಕ್ಷಣೆ ಕುರಿತ ಸಾಮಾಜಿಕ ಕಳಕಳಿಯ ನೃತ್ಯವನ್ನು ಕಲಾವಿದರು ಪ್ರದರ್ಶಿಸಿದರು.
ಡೊಳ್ಳು ಕುಣಿತ ಸೇರಿದಂತೆ ವಿವಿಧ ಕಲಾತಂಡಗಳು ಮಕ್ಕಳನ್ನು ರಂಜಿಸಿದವು. ವಿಶೇಷ ಅತಿಥಿ ನಟ ಯಶ್ ಮಕ್ಕಳಿಗೆ ಹಸ್ತಲಾಘವ ನೀಡಿ ಶುಭಾಶಯ ಕೋರಿದರು. ಮಕ್ಕಳ ಜೊತೆ ಸೆಲ್ಫಿ ತೆಗೆದುಕೊಂಡರು.
ಪೊಲೀಸ್ ಅಧಿಕಾರಿ, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣ ತೊಟ್ಟಿದ್ದ ಮಕ್ಕಳು ಗಮನ ಸೆಳೆದರು.
ಕಮಿಷರ್ ಭಾಸ್ಕರ್ ರಾವ್, ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ, ಹೆಚ್ಚುವರಿ ಕಮಿಷನರ್ ಉಮೇಶ್ಕುಮಾರ್ ಜಾತ್ರೆಯಲ್ಲಿ ಪಾಲ್ಗೊಂಡು ಮಕ್ಕಳೊಂದಿಗೆ ಮಕ್ಕಳಾದರು.
ಪೊಲೀಸರ ಬಗ್ಗೆ ಧೈರ್ಯ ತುಂಬಿ: ‘ಪೊಲೀಸರು ಎಂದರೆ ಭಯಪಡಬೇಕಿಲ್ಲ. ಅವರೆಲ್ಲ ನಮ್ಮ ರಕ್ಷಕರು. ಪೊಲೀಸರ ಬಗ್ಗೆ ಮಕ್ಕಳಿಗೆ ಧ್ಯೆರ್ಯ ತುಂಬುವ ಕೆಲಸವನ್ನು ಪೋಷಕರು ಮಾಡಬೇಕು’ ಎಂದು ನಟ ಯಶ್ ಹೇಳಿದರು.
‘ಜನರು ಯಾವುದೇ ಭಯವಿಲ್ಲದೆ ಪೊಲೀಸ್ ಠಾಣೆಗೆ ಹೋಗಿ ದೂರು ನೀಡುವಂತಾಗಬೇಕು. ಕಾನೂನಿನ ದಾರಿಯಲ್ಲಿ ನಾವೆಲ್ಲರೂ ನಡೆಯಬೇಕು’ ಎಂದು ಹೇಳಿದರು.