ಬೆಂಗಳೂರು: ಪಂಚಮಸಾಲಿ ಸಮುದಾಯಕ್ಕೆ 2 ‘ಎ’ ಮೀಸಲಾತಿ ಕಲ್ಪಿಸಲು ಒತ್ತಾಯಿಸಿ, ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಜಮಖಂಡಿ ಹಾಗೂ ಮಹಾಲಿಂಗಪುರ ಪಂಚಮಸಾಲಿ ಸಮುದಾಯದವರು ಚಿಪ್ಪು ಚಳವಳಿ ನಡೆಸಿದರು.
ಕೈಯಲ್ಲಿ ತೆಂಗಿನ ಚಿಪ್ಪು ಇಟ್ಟುಕೊಂಡು ಆಕ್ರೋಶ ಹೊರಹಾಕಿದರು.
ಸ್ವಾಮೀಜಿ ನೇತೃತ್ವದಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ಹೊರಹಾಕಿದ್ದ ಪ್ರತಿಭಟನಕಾರರು, ಶನಿವಾರ ಬೆಂಗಳೂರಿಗೆ ಬಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.
‘ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಪಂಚಮಸಾಲಿ ಸಮುದಾಯವನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳುತ್ತಿದೆ. ಸಮುದಾಯದ ಪರವಾಗಿ ಕೆಲಸ ಮಾಡುತ್ತಿಲ್ಲ’ ಎಂದು ಆಪಾದಿಸಿದರು.
ಮುಖಂಡರಾದ ದೀಪಕ್ ಜುಂಜರವಾಡ, ಡಾ.ಬಿ.ಎಸ್.ಪಾಟೀಲ್, ಪುಟ್ಟರಾಜ್ ಹಳ್ಳದ, ಶಿವ ಕುಮಾರ್ ಮೇಟಿ, ಮಲ್ಲಿಕಾರ್ಜುನ ಹಿರೇಕೊಪ್ಪ, ಕಾಂತೇಶ್ ತುಂಬಗಿ ಇದ್ದರು.