ಚಿತ್ರದುರ್ಗ: ಮುರುಘಾಮಠದ 2017 ನೇ ಸಾಲಿನ ಬಸವ ಶ್ರೀ ಪ್ರಶಸ್ತಿಗೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕು ದಾಸನದೊಡ್ಡಿ ಗ್ರಾಮದ ಪ್ರಕೃತಿ ಸಂರಕ್ಷಕ ಕಾಮೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಏಪ್ರಿಲ್ 15ರಂದು ಮುರುಘಾಮಠದ ಅಲ್ಲಮಪ್ರಭು ಸಭಾಂಗಣದಲ್ಲಿ ವಿಶಿಷ್ಟ ರೀತಿಯಲ್ಲಿ ಆಯೋಜಿಸಿರುವ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಶಿವಮೂರ್ತಿ ಮುರುಘಾಶರಣರು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.
ಪ್ರಶಸ್ತಿಯು ₹ 5 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ.
ಮಳವಳ್ಳಿ ತಾಲ್ಲೂಕಿನ ಕುಂದನಿ ಪರ್ವತದ ಮೇಲೆ ಕೆರೆ, ಕಟ್ಟೆ ಕಟ್ಟಿರುವ ಕಾಮೇಗೌಡ ಅವರು ಪ್ರಕೃತಿ ಸಂರಕ್ಷಕ ಎಂದೇ ಪ್ರಖ್ಯಾತರಾಗಿದ್ದಾರೆ. ಬಿಸಿಲಿನ ಬೇಗೆಯಿಂದ ತತ್ತರಿಸುವ ಜೀವರಾಶಿಗಳಿಗೆ ಜೀವಜಲ ನೀಡುವ ಮಹಾಂತರಾಗಿದ್ದಾರೆ. ಬಸವಣ್ಣನವರ ಕಾಯಕ ತತ್ವ ಪಾಲನೆಯಲ್ಲಿ ತೊಡಗಿರುವ ಕಾಮೇಗೌಡರನ್ನು ಬಸವಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಶರಣರು ತಿಳಿಸಿದರು.