ಸಿ.ವಿ. ರಾಮನ್ ನಗರ: ನಾಗರಿಕರ ಒತ್ತಾಸೆ; ಕೆರೆಗೆ ಶುಕ್ರದೆಸೆ
ಸಿ.ವಿ. ರಾಮನ್ ನಗರದಲ್ಲಿ ‘ಹೈಟೆಕ್’ ಅಭಿವೃದ್ಧಿ ಕಂಡ ಬೈರಸಂದ್ರ ಕೆಳಗಿನ ಕೆರೆ
Last Updated 23 ನವೆಂಬರ್ 2022, 21:05 IST
ಅಕ್ಷರ ಗಾತ್ರ
ಬೆಂಗಳೂರು: ಸುತ್ತಮುತ್ತಲು ಗಗನಚುಂಬಿ ಕಟ್ಟಡಗಳು. ಹೈಟೆಕ್ ರಸ್ತೆ. ಅದರ ಮಧ್ಯಭಾಗದಲ್ಲಿ ಕೊಳಕಿನ ತಾಣ... ಹೀಗಿದ್ದ ಸ್ಥಿತಿ ಇದೀಗ ಬದಲಾಗಿದೆ. ಕೊಳಕು, ಕಲ್ಮಶ, ಕೆಸರು ಎಲ್ಲವೂ ಮಾಯ. ಸ್ವಚ್ಛ ನೀರಿನ ತಾಣವಾಗಿ, ಆಹ್ಲಾದಕರ ಪರಿಸರದಿಂದ ಸ್ಥಳೀಯರ ಮನಸೆಳೆಯುತ್ತಿದೆ ಈ ಕೆರೆ.
ಇದು ಬೈರಸಂದ್ರದ ಕೆಳಗಿನ ಕೆರೆಯ ಚಿತ್ರಣ. ಸುತ್ತಲೂ ಐಟಿ–ಬಿಟಿ ಕಂಪನಿಗಳ ಕಟ್ಟಡಗಳ ಸೊಬಗು ಹೊಂದಿರುವ ಈ ಕೆರೆ ತನ್ನೆಲ್ಲ ಕಲ್ಮಶವನ್ನು ಕಳೆದುಕೊಂಡು ಸಿಂಗಾರಗೊಂಡು ಸಿದ್ಧಗೊಂಡಿದೆ. ಮಕ್ಕಳು ಸೇರಿ ಎಲ್ಲ ವಯೋಮಾನದವರ ನೆಚ್ಚಿನ ತಾಣವಾಗಿದೆ.
ಬೈರಸಂದ್ರದ ಕೆಳಗಿನ ಕೆರೆ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದರೂ ಕೆಲವು ವರ್ಷಗಳ ಹಿಂದೆ ಕಲ್ಮಶದ ತಾಣವಾಗಿತ್ತು. ಐಟಿ–ಬಿಟಿ ಕಂಪನಿಗಳ ನಡುವಿದ್ದ ಈ ಕೆರೆ ಅಭಿವೃದ್ಧಿಗೆ ಆಗೀಗ ಒಂದಷ್ಟು ಕೆಲಸ ನಡೆದಿದ್ದರೂ ಸಮಗ್ರ ಅಭಿವೃದ್ಧಿ ಸಾಧ್ಯವಾಗಿರಲಿಲ್ಲ. ಒಳಚರಂಡಿ ನೀರೇ ತುಂಬಿಹೋಗಿತ್ತು. ಮೀನು ಸಾಕಣೆಗೆ ಅವಕಾಶ ಮಾಡಿಕೊಡಲಾಗಿತ್ತಾದರೂ ಸ್ವಚ್ಛತೆ ಮರೀಚಿಕೆಯಾಯಿತು.
ಸಿ.ವಿ. ರಾಮನ್ ನಗರ ವಿಧಾನಸಭೆ ಕ್ಷೇತ್ರದಲ್ಲಿ ಇರುವುದೇ ಐದು ಕೆರೆ. ಆ ಪೈಕಿ ಎರಡು ರಕ್ಷಣಾ ಇಲಾಖೆಯ ಅಧೀನದಲ್ಲಿವೆ. ಹೀಗಾಗಿ ಬೈರಸಂದ್ರ ಕೆಳಗಿನ ಕೆರೆ ಉಳಿಸಿ, ರಕ್ಷಿಸಬೇಕು ಎಂಬುದು ಸ್ಥಳೀಯರ ಆಗ್ರಹವಾಗಿತ್ತು. ಸರ್ಕಾರದ ಅನುದಾನ ಹಾಗೂ ಸ್ಥಳೀಯ ಶಾಸಕರ ನಿಧಿಯಿಂದ 2019ರಲ್ಲಿ ಕೆರೆಯ ಅಭಿವೃದ್ಧಿ ಕಾರ್ಯ ಆರಂಭವಾಯಿತು. ಕೋವಿಡ್ ಕಾಲದಲ್ಲಿ ಹಲವು ತಿಂಗಳು ಕೆಲಸಗಳು ನಿಂತಿದ್ದರಿಂದ ಕಾಮಗಾರಿ ಒಂದಷ್ಟು ವಿಳಂಬವಾಯಿತು.
‘ಕೆಲಸ ಮುಗಿದಾಗ ಅಥವಾ ಬಿಡುವು ಸಿಕ್ಕಾಗ ಈ ಕೆರೆಯ ದಂಡೆಯ ಮೇಲೆ ಸಹೋದ್ಯೋಗಿಗಳೆಲ್ಲ ಒಂದು ಸುತ್ತು ಹಾಕುತ್ತೇವೆ. ಕೆಲಸದ ಒತ್ತಡವೆಲ್ಲ ಕಳೆದುಹೋಗುತ್ತದೆ. ಕೆರೆಯ ಅಭಿವೃದ್ಧಿಗೆ ಹಸಿರಿನ ತಾಣವಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆ’ ಎಂದು ಐಟಿ ಕಂಪನಿ ಉದ್ಯೋಗಿಗಳಾದ ರಮೇಶ್ ರಾಜು, ಶಂಕರ್, ರೋಹಿತ್ ಹೇಳಿದರು.