ಬೆಂಗಳೂರು: ನಡೆದಿದೆ ಎನ್ನಲಾದ ಅವ್ಯವಹಾರದ ಆರೋಪಗಳ ಬಗ್ಗೆ ವಿಚಾರಣೆ ನಡೆಸಿ ವರದಿ ಸಲ್ಲಿಸಲು ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಎಸ್.ಕೆ.ಕವಿತಾ ಅವರನ್ನು ವಿಚಾರಣಾ ಅಧಿಕಾರಿಯನ್ನಾಗಿ ನೇಮಕ ಮಾಡಲಾಗಿದೆ.
ಬೆಂಗಳೂರು ನಗರ ಜಿಲ್ಲೆ 4ನೇ ವಲಯದ ಸಂಘಗಳ ಜಿಲ್ಲಾ ನೋಂದಣಾಧಿಕಾರಿ ಪಿ.ಶಶಿಧರ ಅವರು ‘ಇತ್ತೀ ಚೆಗೆ ಈ ಕುರಿತಂತೆ ಆದೇಶಿಸಿದ್ದು, ವಿಚಾರಣಾ ಅಧಿ ಕಾರಿಯು ಆರೋಪಗಳಿಗೆ ಸಂಬಂಧಿಸಿದಂತೆ ಎರಡು ತಿಂಗಳ ಒಳಗಾಗಿ ವಿಚಾರಣೆ ನಡೆಸಿ ವರದಿ ಸಲ್ಲಿಸಬೇಕು’ ಎಂದು ನಿರ್ದೇಶಿಸಿದ್ದಾರೆ.
ಆರೋಪಗಳೇನು?: ಚಿತ್ರಕಲಾ ಪರಿಷತ್ ವತಿಯಿಂದ 2021ರಲ್ಲಿ ಜರುಗಿದ 18ನೇ ಆನ್ಲೈನ್ ಚಿತ್ರಸಂತೆ ಯಲ್ಲಿ ಸುಮಾರು ₹ 50 ಲಕ್ಷ ಮೊತ್ತವನ್ನು ವೆಚ್ಚ ಮಾಡಲಾಗಿದ್ದು, ಅತಿ ಹೆಚ್ಚಿನ ಮೊತ್ತಕ್ಕೆ ವೆಬ್ ಸೈಟ್ ನಿರ್ವಹಣೆಗಾಗಿ ಗುತ್ತಿಗೆ ನೀಡಲಾಗಿದೆ. ಈ ವೇಳೆ ಕಾನೂನುಬದ್ಧ ಟೆಂಡರ್ ಪ್ರಕ್ರಿಯೆ ಗಳನ್ನು ಪಾಲನೆ ಮಾಡಿಲ್ಲ’ ಎಂದು ಆರೋಪಿಸಿ ಕೆ.ಇ. ರಾಧಾಕೃಷ್ಣ ಅವರು ಪರಿಷತ್ತಿನ ಕಾರ್ಯಕಾರಿ ಸಮಿತಿಯ ವಿರುದ್ಧ ಸಹಕಾರ ಸಚಿವರಿಗೆ ದೂರು ಸಲ್ಲಿಸಿದ್ದರು.
‘ಚಿತ್ರಸಂತೆ ವೇಳೆ ಕ್ಯಾಂಪಸ್ ಸ್ಥಳವನ್ನು ಚಿತ್ತಾರ ಕರಕುಶಲ ಪ್ರದರ್ಶನ ಹಾಗೂ ಮಾರಾಟಕ್ಕಾಗಿ ನಿಯಮ ಉಲ್ಲಂಘಿಸಿ ಬಾಡಿಗೆಗೆ ನೀಡಲಾಗಿದೆ. ಪರಿಷತ್ತಿನ ಮೂಲಕ ಶಿವಮೊಗ್ಗ ಸ್ಮಾರ್ಟ್ಸಿಟಿ ಯೋಜನೆ ಮತ್ತು ಬಿಎಂಆರ್ಸಿಎಲ್ ಸಂಸ್ಥೆಗಳ ಮಧ್ಯದ ಒಪ್ಪಂದದಂತೆ ಮಾಡಲಾದ ಕಲಾ ಪ್ರಕಾರಗಳ ಮತ್ತು ಭಿತ್ತಿಚಿತ್ರಗಳ ರಚನೆಯಲ್ಲಿಯೂ ಅವ್ಯವಹಾರ ನಡೆದಿದೆ’ ಎಂದೂ ರಾಧಾಕೃಷ್ಣ ದೂರಿನಲ್ಲಿ ಆರೋಪಿಸಿದ್ದರು.
‘ಈ ದೂರು ದೂರಿನ ಕುರಿತಂತೆ 2022ರ ಡಿ. 9, 2023ರ ಜ. 6, 30, ಫೆ. 10, ಹಾಗೂ ಮಾರ್ಚ್ 27 ರಂದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಪರಿಷತ್ತಿನಿಂದ ಸಲ್ಲಿಸಲಾದ ದಾಖಲೆಗಳನ್ನು ಪರಿ ಶೀಲಿಸಿದಾಗ 18ನೇ ಆನ್ಲೈನ್ ಚಿತ್ರಸಂತೆಯ ಬಗ್ಗೆ ಟೆಂಡರ್ ಪ್ರಕ್ರಿಯೆ ನಡೆಸದೇ ಇರುವುದೂ ಸೇರಿದಂತೆ ಹಲವು ಲೋಪದೋಷಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ, ಈ ಎಲ್ಲಾ ಆರೋಪಗಳ ಬಗ್ಗೆ ಶಾಸನಬದ್ಧ ವಿಚಾರಣೆ ನಡೆಸುವುದು ಸೂಕ್ತವೆಂಬ ಅಭಿಪ್ರಾಯದೊಂದಿಗೆ ವಿಚಾರಣಾಧಿಕಾರಿ ನೇಮಕ ಮಾಡಲಾಗುತ್ತಿದೆ’ ಎಂದು ಆದೇಶದಲ್ಲಿ ಹೇಳಲಾಗಿದೆ.