ಬೆಂಗಳೂರು: ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಹಾಗೂ ಕೆಂಪೇಗೌಡ ಥೀಮ್ ಪಾರ್ಕ್ ಉದ್ಘಾಟನೆಗೆ ಪ್ರಧಾನಮಂತ್ರಿ ನರೇಂದ್ರ ಆಗಮಿಸುತ್ತಿದ್ದು, ಸೂಕ್ತ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
ನಗರದಲ್ಲಿ ಗುರುವಾರ ನಡೆದ ನಾಡಪ್ರಭು ಕೆಂಪೇಗೌಡ ಪಾರಂಪರಿಕ ತಾಣ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಅವರು ಮಾತನಾಡಿದರು.
’ನಾಡಿನ ವಿವಿಧ ಸ್ಥಳಗಳಿಂದ ಪವಿತ್ರ ಮೃತ್ತಿಕೆ ಹಾಗೂ ಜಲಸಂಗ್ರಹಿಸುವ ಅಭಿಯಾನದಡಿ ತಾಲ್ಲೂಕು ಕೇಂದ್ರಗಳಿಗೆ ಮಣ್ಣನ್ನು ತಲುಪಿಸಿ, ನಂತರ ಜಿಲ್ಲಾ ಕೇಂದ್ರಕ್ಕೆ ತರಿಸಬೇಕು. ಕೆಂಪೇಗೌಡರ ಜೀವನಚರಿತ್ರೆ ಬಿಂಬಿಸುವ ವಿಡಿಯೊ ಮ್ಯಾಪಿಂಗ್ ಹಾಗೂ ನೃತ್ಯ ರೂಪಕ ಸಿದ್ಧಪಡಿಸಲು ತಯಾರಿ ಮಾಡಿಕೊಳ್ಳಿ‘ ಎಂದು ನಿರ್ದೇಶನ ನೀಡಿದರು.
ಕೆಂಪೇಗೌಡರ ವೀರಸಮಾಧಿ ಅಭಿವೃದ್ಧಿಗೆ ಭೂಸ್ವಾಧೀನ ಪ್ರಕ್ರಿಯೆ, 46 ತಾಣಗಳಲ್ಲಿ ನಾಮಫಲಕಗಳ ಅಳವಡಿಕೆ, ಮಾಗಡಿ ಕೋಟೆ ಸಂರಕ್ಷಣೆ ಕಾರ್ಯಗಳನ್ನು ಚುರುಕುಗೊಳಿಸುವಂತೆ ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥನಾರಾಯಣ, ಆರ್.ಅಶೋಕ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್, ಸ್ಟಾರ್ಟ್ ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ್ ಪ್ರಕಾಶ್ ಉಪಸ್ಥಿತರಿದ್ದರು.