ಯಲಹಂಕ: ‘ಯಾವುದೇ ಸಹಕಾರಿ ಸಂಘಗಳು ಸರ್ವತೋಮುಖ ಅಭಿವೃದ್ಧಿ ಹೊಂದಬೇಕಾದರೆ ಆಡಳಿತ ಮಂಡಳಿಗೆ ಷೇರುದಾರರ ಸಹಕಾರ ಮತ್ತು ಪ್ರೋತ್ಸಾಹ ಅತಿಮುಖ್ಯ. ಪಡೆದ ಸಾಲವನ್ನು ಸದಸ್ಯರು ಕಾಲಮಿತಿಯೊಳಗೆ ಮರುಪಾವತಿ ಮಾಡಿದರೆ ಸೊಸೈಟಿಯ ಬಂಡವಾಳ ವೃದ್ಧಿಯಾಗುವುದರ ಜೊತೆಗೆ ಹೆಚ್ಚಿನ ಸಾಲಸೌಲಭ್ಯ ನೀಡಲು ಸಾಧ್ಯವಾಗುತ್ತದೆ’ ಎಂದು ಹೈಕೋರ್ಟ್ನ ಹಿರಿಯ ವಕೀಲ ಎಸ್.ವಿ.ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಜಕ್ಕೂರಿನ ಅಂಬೇಡ್ಕರ್ ಸಮುದಾಯ ಭವನದ ಆವರಣದಲ್ಲಿ ಆಯೋಜಿಸಿದ್ದ ಜಕ್ಕೂರು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2ನೇ ವಾರ್ಷಿಕ ಸರ್ವಸದಸ್ಯರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ‘ಪಡೆದ ಸಾಲದಿಂದ ಮಕ್ಕಳ ಶಿಕ್ಷಣ, ಕಷ್ಟಕಾಲ, ಸಣ್ಣಪುಟ್ಟ ವ್ಯಾಪಾರ ಮತ್ತಿತರ ಒಳ್ಳೆಯ ಉದ್ದೇಶಗಳಿಗೆ ವಿನಿಯೋಗಿಸಬೇಕು’ ಎಂದರು.
ಸೊಸೈಟಿಯ ಸಂಸ್ಥಾಪಕ ಅಧ್ಯಕ್ಷ ರವಿಕುಮಾರ್, ‘ಆರಂಭದಲ್ಲಿ ಸ್ತ್ರೀಶಕ್ತಿ ಗುಂಪುಗಳ ಸದಸ್ಯರು ಹಾಗೂ ಸಣ್ಣಪುಟ್ಟ ವ್ಯಾಪಾರಿಗಳಿಗೆ ತಲಾ ₹25 ಸಾವಿರ ಹಾಗೂ ನಂತರ ₹50 ಸಾವಿರ ಸಾಲ ವಿತರಿಸಲಾಯಿತು. ಸದಸ್ಯರು ಕೊರೊನಾ ಸಂದರ್ಭದಲ್ಲಿಯೂ ಸಹ ಪ್ರಾಮಾಣಿಕವಾಗಿ ಮರುಪಾವತಿ ಮಾಡುತ್ತಿರುವುದರಿಂದ ಸೊಸೈಟಿಯಲ್ಲಿ ಇಲ್ಲಿಯವರೆಗೆ ₹1.50 ಕೋಟಿ ವಹಿವಾಟು ನಡೆಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇ-ಸ್ಟ್ಯಾಂಪಿಂಗ್ ಸೇವೆಗೆ ಚಾಲನೆ ನೀಡಲಾಯಿತು. ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆಗೊಳಿಸಲಾಯಿತು. ಸೊಸೈಟಿಯ ಉಪಾಧ್ಯಕ್ಷ ವಿ.ನಾಗರಾಜಪ್ಪ, ನಿರ್ದೇಶಕರಾದ ಬಿ.ಜಿ.ರಮೇಶ, ಡಿ.ಎಸ್.ಬಸವರಾಜಯ್ಯ, ಬಿ.ವಿ.ವೀರಭದ್ರಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.