ಬೆಂಗಳೂರು: ‘ಕರಾವಳಿ ವ್ಯಾಪ್ತಿಯಲ್ಲಿ ಕೋಮುವಾದದ ವಿಷ ಬಿತ್ತಲಾಗಿದ್ದು, ಶಾಂತಿ ಕದಡುವ ಕೆಲಸಗಳು ನಡೆಯುತ್ತಿವೆ’ ಲೇಖಕ ಡಾ.ಪುರುಷೋತ್ತಮ ಬಿಳಿಮಲೆ ಕಳವಳ ವ್ಯಕ್ತಪಡಿಸಿದರು.
ನಗರದಲ್ಲಿ ಶನಿವಾರ ಜನಮನ ಪ್ರತಿಷ್ಠಾನ ಹಾಗೂ ಸಮತಾ ಅಧ್ಯಯನ ಕೇಂದ್ರ ಆಯೋಜಿಸಿದ್ದ ‘ಪ್ರಬುದ್ಧ ಕರ್ನಾಟಕ: ಜನಮನ ಸಮಾವೇಶ’ದಲ್ಲಿ ಅವರು ‘ಸಾಹಿತ್ಯ ಕಲೆಗಳಿಗೆ ಉತ್ತೇಜನ ಮತ್ತು ಸಾಂಸ್ಕೃತಿಕ ಸಂಸ್ಥೆಗಳ ಸ್ವಾಯತ್ತತೆ’ ಕುರಿತು ವಿಷಯ ಮಂಡಿಸಿದರು.
‘ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕವನ್ನು ‘ಸರ್ವ ಜನಾಂಗದ ಶಾಂತಿಯ ತೋಟ’ವೆಂದು ಕರೆದರು. ಆದರೆ, ಮತೀಯ ಶಕ್ತಿಗಳು ಅದನ್ನು ಒಪ್ಪದೇ ತಮ್ಮ ರಾಜಕೀಯ ಕಾರಣಕ್ಕಾಗಿ ರಾಜ್ಯದಲ್ಲಿ ಶಾಂತಿ ಕದಡುತ್ತಿವೆ. ಅಲ್ಲದೇ ಸೌಹಾರ್ದ ವಾತಾವರಣವನ್ನೇ ನಾಶ ಮಾಡಲು ಹೊರಟಿವೆ’ ಎಂದು ಆಪಾದಿಸಿದರು.
‘ಕೆಲವು ಆಚರಣೆಗಳು ಹಾಗೂ ಯಕ್ಷಗಾನ ಸೇರಿದಂತೆ ಅತ್ಯುತ್ತಮ ಜನಪದ ಪರಂಪರೆಗಳೂ ಈಗ ಕೋಮುವಾದದ ತೆಕ್ಕೆಗೆ ಬಿದ್ದಿವೆ. ಅವುಗಳೂ ನೆಲೆ ಕಳೆದುಕೊಳ್ಳುತ್ತಿವೆ. ಅದನ್ನು ಪೋಷಿಸಿದವರೂ ಸೇರಿದಂತೆ ಎಲ್ಲರನ್ನೂ ಅದು ಬಲಿ ತೆಗೆದುಕೊಳ್ಳಲು ಸಿದ್ಧವಾಗಿದೆ’ ಎಂದು ಎಚ್ಚರಿಸಿದರು.
‘ರಾಜ್ಯಕ್ಕೆ ಎಂದೂ ಕೋಮುವಾದ ನುಸುಳಿರಲಿಲ್ಲ. ಇದಕ್ಕೆ ರಾಜ್ಯದ ಇತಿಹಾಸವೇ ಸಾಕ್ಷಿಯಾಗಿದೆ. ರಾಜ್ಯಕ್ಕೆ ಯಾರೇ ಬಂದರೂ ಅವರನ್ನು ತಿರಸ್ಕರಿಸುವ ಕೆಲಸ ಮಾಡಿರಲಿಲ್ಲ. ಎಲ್ಲ ಧರ್ಮ ಹಾಗೂ ಸಮುದಾಯಗಳನ್ನು ಒಳ್ಳಗೊಳ್ಳುವ ವಿಶಿಷ್ಟತೆ ಮೆರೆದ ರಾಜ್ಯ ನಮ್ಮದಾಗಿದೆ. ಇಂತಹ ರಾಜ್ಯಕ್ಕೆ ಕೋಮುವಾದ ಕಲಿಸುವ ಪ್ರಯತ್ನಗಳು ನಡೆದಿವೆ. ಅದನ್ನು ಮೆಟ್ಟಿ ನಿಲ್ಲಬೇಕು’ ಎಂದು ಕರೆ ನೀಡಿದರು.
ಶಿಕ್ಷಣ ತಜ್ಞ ಪ್ರೊ.ವಿ.ಪಿ.ನಿರಂಜನಾರಾಧ್ಯ ಅವರು ‘ಪ್ರಾಥಮಿಕ ಶಿಕ್ಷಣವನ್ನು ಮಕ್ಕಳ ಜ್ಞಾನ ವಿಕಸನ ನೆಲೆಯಲ್ಲಿ ಪರಿಣಾಮಕಾರಿ ಮಾರ್ಗೋಪಾಯಗಳು’ ಕುರಿತು ಮಾತನಾಡಿ, ‘ಎಲ್ಲರಿಗೂ ಶಿಕ್ಷಣದ ಹಕ್ಕು ಪರಿಣಾಮಕಾರಿ ಹಾಗೂ ಪ್ರಾಮಾಣಿಕವಾಗಿ ಜಾರಿಗೊಳ್ಳಬೇಕಿದೆ’ ಎಂದರು.
ಸಾಹಿತಿ ಜಿ.ರಾಮಕೃಷ್ಣ ಮಾತನಾಡಿ, ‘ಸಮಾವೇಶದಲ್ಲಿ ಮಂಡನೆಯಾದ ವಿಷಯಗಳ ಸಂಕ್ಷಿಪ್ತ ಸಾರವನ್ನು ಪಟ್ಟಿ ಮಾಡಿ ಮುಖ್ಯಮಂತ್ರಿಗೆ ಸಲ್ಲಿಸಲಾಗುವುದು. ಎಲ್ಲ ಸಮಸ್ಯೆಗಳಿಗೂ ಅವರು ಪರಿಹಾರ ಹುಡುಕುವ ಭರವಸೆ ಇದೆ’ ಎಂದರು.
ಡಾ.ಎಚ್.ಜಯಪ್ರಕಾಶ್ ಶೆಟ್ಟಿ, ಡಾ.ಟಿ.ಆರ್. ಚಂದ್ರಶೇಖರ್, ಪ್ರೊ.ರಾಜೇಂದ್ರ ಪೌದ್ದಾರ್ ವಿಷಯ ಮಂಡಿಸಿದ್ದರು. ಜನಮನ ಪ್ರತಿಷ್ಠಾನದ ಅಧ್ಯಕ್ಷ ಲಕ್ಷ್ಮಣ ಕೊಡಸೆ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.