ಬೆಂಗಳೂರು: ‘ನ್ಯಾಷನಲ್ ಹೆರಾಲ್ಡ್ ಪ್ರಕರಣ ಮುಂದಿಟ್ಟುಕೊಂಡು ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಗೆ ಕೇಂದ್ರ ಸರ್ಕಾರ ಅನಗತ್ಯ ಕಿರುಕುಳ ನೀಡುತ್ತಿದೆ. ಇದನ್ನು ಖಂಡಿಸಿ ಶಾಂತಿನಗರದಲ್ಲಿರುವ ಜಾರಿ ನಿರ್ದೇಶನಾಲಯದ (ಇಡಿ) ಕಚೇರಿ ಎದುರು ಇದೇ 13ರಂದು ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ‘ಅಂದು ದೇಶದ ಎಲ್ಲ ಭಾಗಗಳಲ್ಲಿರುವ ಇ.ಡಿ. ಕಚೇರಿ ಎದುರು ಪಕ್ಷದ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ’ ಎಂದರು.
‘ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಆರ್ಥಿಕ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ಆರಂಭಿಸಿದೆ. ನಮ್ಮ ನಾಯಕರುಗಳು ಇಂಥ ಬೆದರಿಕೆಗಳಿಗೆ ಹೆದರುವುದಿಲ್ಲ’ ಎಂದು ಡಿ.ಕೆ. ಶಿವಕುಮಾರ್ ಹೇಳಿದರು.
‘ಅಕ್ರಮ ಆಸ್ತಿ ರಕ್ಷಣೆಗೆ ಪ್ರತಿಭಟನೆ ಮಾರ್ಗ’ ಬೆಂಗಳೂರು: ‘ಕಾಂಗ್ರೆಸ್ ನಾಯಕರು ತಮ್ಮ ಅಕ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ದೇಶದ ತನಿಖಾ ಸಂಸ್ಥೆಗಳ ವಿರುದ್ಧವೇ ಪ್ರತಿಭಟನೆ ನಡೆಸಲು ಹೊರಟಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕ ಟೀಕಿಸಿದೆ.
ಈ ಕುರಿತು ಬಿಜೆಪಿ ರಾಜ್ಯ ಘಟಕದ ಅಧಿಕೃತ ಟ್ವಿಟರ್ ಖಾತೆಯಿಂದ ಶನಿವಾರ, ‘ಭ್ರಷ್ಟರ ಪರವಾಗಿ ಭ್ರಷ್ಟರ ಪ್ರತಿಭಟನೆ!’ ಎಂಬ ಶೀರ್ಷಿಕೆಯಡಿ ಸರಣಿ ಟ್ವೀಟ್ಗಳ ಮೂಲಕ ವಾಗ್ದಾಳಿ ನಡೆಸಲಾಗಿದೆ.