ಬೆಂಗಳೂರು: ಕೊರೊನಾ ಸೋಂಕಿಗೆ ನಗರದಲ್ಲಿ ಮತ್ತೆ ಎಂಟು ಮಂದಿ ಮೃತಪಟ್ಟಿರುವುದು ಗುರುವಾರ ದೃಢಪಟ್ಟಿದೆ. ಇದರಿಂದಾಗಿ ಕೋವಿಡ್ಗೆ ಸಾವಿಗೀಡಾದವರ ಸಂಖ್ಯೆ ಅರ್ಧಶತಕದ ಗಡಿ (51) ದಾಟಿದೆ.
ನಗರದಲ್ಲಿ ಹೊಸದಾಗಿ 17 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 844ಕ್ಕೆ ತಲುಪಿದೆ. 14 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 384ಕ್ಕೆ ಏರಿಕೆಯಾಗಿದೆ. 33 ಮಂದಿ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ನಗರದಲ್ಲಿ 18 ದಿನಗಳಲ್ಲಿ 41 ಮಂದಿ ಸಾವಿಗೀಡಾಗಿದ್ದಾರೆ.
ಮಾಗಡಿ ರಸ್ತೆಯಕುಷ್ಠರೋಗ ಆಸ್ಪತ್ರೆಯ 37 ವರ್ಷದ ಸ್ಟಾಫ್ ನರ್ಸ್ಗೆ ಸೋಂಕು ತಗುಲಿದೆ. ಅವರ ಕುಟುಂಬದ ಮೂರು ಮಂದಿಯನ್ನು ಕ್ವಾರಂಟೈನ್ ಮಾಡಲಾಗಿದೆ.ಚೆನ್ನೈನಿಂದ ನಗರಕ್ಕೆ ಮರಳಿದ್ದ ಹುಣಸೆಮಾರನಹಳ್ಳಿಯ ಶಕ್ತಿನಗರದ ಮೂವರಿಗೆ ಸೋಂಕು ದೃಢಪಟ್ಟಿದೆ. 46 ವರ್ಷದ ಪುರುಷ, 36 ವರ್ಷದ ಮಹಿಳೆ ಮತ್ತು 17 ವರ್ಷದ ಯುವಕ ಮನೆಯಲ್ಲಿಯೇ ಕ್ವಾರಂಟೈನ್ಗೆ ಒಳಗಾಗಿದ್ದರು.
ಶಸ್ತ್ರಚಿಕಿತ್ಸೆಗೂ ಮುನ್ನ ದೃಢ:ರಮೇಶ್ ನಗರದ 32 ವರ್ಷದ ಮಹಿಳೆ, ರಾಮಮೂರ್ತಿನಗರದ 25 ವರ್ಷದ ಯುವಕ, ಮುನ್ನೇನಕೊಳಾಲು ಪಿ.ಎಲ್ ಬಡಾವಣೆಯ29 ವರ್ಷದ ಯುವಕ ಮತ್ತು ಹೊಯ್ಸಳನಗರದ 52 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಈ ನಾಲ್ವರು ವಿವಿಧ ಶಸ್ತ್ರಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ತೆರಳಿದಾಗ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.
ಅಂಜನಾಪುರದ ಅಮೃತನಗರದ 54 ವರ್ಷದ ಮಹಿಳೆ, ಮಾರುತಿ ಬಡಾವಣೆಯ 78 ವರ್ಷದ ವೃದ್ಧ, ವಿನಾಯಕನಗರದ 40 ವರ್ಷದ ಪುರುಷ, ಗೊಟ್ಟಿಗೆರೆಯ 23 ವರ್ಷದ ಯುವಕ ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್ಐ) ಬಳಲುತ್ತಿದ್ದು, ಕೋವಿಡ್ ಪರೀಕ್ಷೆಯಿಂದ ಸೋಂಕು ದೃಢಪಟ್ಟಿದೆ.