ಬೆಂಗಳೂರು: ‘ಕೊರೊನಾ ಹರಡುವಿಕೆ ತಡೆಗೆ ಸಾರ್ವಜನಿಕರ ಸಹಕಾರ ಬೇಕು. ಪ್ರತಿಯೊಬ್ಬರು ಸಾಮೂಹಿಕವಾಗಿ ಜಾಗೃತಿ ಮೂಡಿಸಿ ಕೊರೊನಾ ತೊಲಗಿಸಬೇಕು’ ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದರು.
‘ನಮ್ಮ ಬೆಂಗಳೂರು ಫೌಂಡೇಷನ್’ ವತಿಯಿಂದ ನಗರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಡಿಯೊ ಸಂವಾದದಲ್ಲಿ ಅವರು ಮಾತನಾಡಿದರು.
‘ಪೊಲೀಸರು ಸಾಕಷ್ಟು ಒತ್ತಡದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರೇ ಸ್ವಯಂಸೇವಕರಾಗಿ, ಮಾರ್ಷಲ್ಗಳಾಗಿ ಕೆಲಸ ಮಾಡಲು ಮುಂದೆ ಬರಬೇಕು. ಸಾಮಾಜಿಕ ಜಾಲತಾಣ ಹಾಗೂ ಇತರೆಡೆಯಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರ್ವಹಿಸಬೇಕು’ ಎಂದೂ ಅವರು ತಿಳಿಸಿದರು.
‘ಕೆಲ ಅಪಾರ್ಟ್ಮೆಂಟ್ ನಿವಾಸಿಗಳು ಸ್ವಯಂ ಪ್ರೇರಿತವಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಇದೇ ಮಾದರಿಯನ್ನೇ ಪ್ರತಿಯೊಂದು ಕಡೆ ಜಾರಿಗೆ ತರುವಂತಾಗಬೇಕು’ ಎಂದು ಹೊಗಳಿದರು.
ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಿವಾಸಿಗಳು, ‘ಖಾಸಗಿ ಆಸ್ಪತ್ರೆಯವರು ದುಬಾರಿ ಶುಲ್ಕ ವಸೂಲಿ ಮಾಡುತ್ತಿದ್ದಾರೆ’ ಎಂದು ದೂರಿದರು.