ಬೆಂಗಳೂರು: ಕೌಬಾಯ್ ಹ್ಯಾಟ್, ಅದರ ಮೇಲೊಂದು ಕಿರೀಟ. ಅದಕ್ಕೊಂದು ನವೀಲುಗರಿ. ಹೆಗಲ ಮೇಲೆ ಮಣ ಭಾರದ ಗದೆ... ಇಂಥ ಚಿತ್ರ, ವಿಚಿತ್ರ ವೇಷಭೂಷಣ ತೊಟ್ಟುಲಾಕಡೌನ್ ನಿರ್ಜನ ಸಮಯದಲ್ಲೂ ಸೈಕಲ್ ಮೇಲೆ ತಿರುಗುವ ಇವರು ‘ಸೈಕಲ್ ಬಾಬಾ ಕೊರೊನಾ ವಾರಿಯರ್’!
ಪ್ರತಿದಿನ ನಗರದಲ್ಲಿ 25–30 ಕಿ.ಮೀ ಸೈಕಲ್ನಲ್ಲಿ ಸುತ್ತುತ್ತ ಆಧ್ಯಾತ್ಮಿಕ ಚಿಂತನೆಗಳ ಜತೆ ಕೊರೊನಾ ಬಗ್ಗೆಯೂ ಜಾಗೃತಿ ಮೂಡಿಸುತ್ತಿರುವ ಇವರ ಮೂಲ ಹೆಸರು ಸತೀಶ್ ಕುಮಾರ್.
ವೃತ್ತಿಯಲ್ಲಿ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಹಳೆಯ ವಿದ್ಯಾರ್ಥಿಗಳ ಸಂಘದ ಆಡಳಿತ ಅಧಿಕಾರಿ.ಸೈಕಲ್ ಮೇಲೆ ಸುತ್ತುವುದು ಇವರ ಅಚ್ಚುಮೆಚ್ಚಿನ ಹವ್ಯಾಸ. ಹಾಗಾಗಿಯೇ ಅವರಿಗೆ ‘ಸೈಕಲ್ ಬಾಬಾ’ ಎಂಬ ಹೆಸರು ಬಂದಿದೆ.
‘ಸ್ಪಿರಿಚುವಲ್ ವಾರಿಯರ್’ ಮತ್ತು ‘ಫನ್ ಸೈಕ್ಲಿಸ್ಟ್’ ಎಂದು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ಅವರು, ಈಗ ಕೊರೊನಾ ವಾರಿಯರ್ನಂತೆಯೂ ಕೆಲಸ ಮಾಡುತ್ತಿದ್ದಾರೆ.
ಒಂದು ದಿನ ಗದೆ, ಮತ್ತೊಂದು ದಿನ ತ್ರಿಶೂಲ, ಬಿಲ್ಲು, ಬಾಣ... ಹೀಗೆ ದಿನಕ್ಕೊಂದುವೇಷ ಮತ್ತು ವೇಷಕ್ಕೆ ತಕ್ಕ ಅಸ್ತ್ರ ಹಿಡಿದು ತಿರುಗುವ ಚಿತ್ರ, ವಿಚಿತ್ರ ವೇಷಭೂಷಣಗಳಿಂದಲೇ ಸೈಕಲ್ ಬಾಬಾ ಜನರ ಗಮನ ಸೆಳೆಯುತ್ತಾರೆ.
‘ಆಧ್ಯಾತ್ಮದ ಜತೆಗೆ ಕೊರೊನಾ ಕುರಿತು ಜನಜಾಗೃತಿ ಮೂಡಿಸುತ್ತಿದ್ದೇನೆ. ಪ್ರೀತಿ, ನೆಮ್ಮದಿ, ಶಾಂತಿ, ಸಹಬಾಳ್ವೆ, ಸಮರಸದ ಬಗ್ಗೆ ಪ್ರಚಾರ ಮಾಡುತ್ತೇನೆ’ ಎಂದು ಅವರು ತಮ್ಮ ದಿನಚರಿ ಹಂಚಿಕೊಂಡರು.
‘ಕೊರೊನಾ ಎನ್ನುವುದು ಮಾನವನ ಅತಿಯಾಸೆಗಳಿಗೆ ಪ್ರಕೃತಿ ಕಲಿಸಿದ ಪಾಠ. ಕೊರೊನಾ ವೈರಸ್ಗೆ ಹೆದರುವ ಅಗತ್ಯವಿಲ್ಲ. ಅದು ದೇವರು ಮತ್ತು ಪ್ರಕೃತಿಯ ಸೃಷ್ಟಿ. ದೇವರು ಮತ್ತು ಪ್ರಕೃತಿಯಿಂದಲೇ ಕೊರೊನಾ ನಾಶ ವಾಗುತ್ತದೆ. ನಾವು ಪರಿಸರ, ಭೂಮಂಡಲ ಕಾಪಾಡಬೇಕು. ಅಂದಾಗ ಜೀವಸಂಕುಲ ಉಳಿಯುತ್ತದೆ’ ಎನ್ನುವುದು ಸೈಕಲ್ ಬಾಬಾ ಅನಿಸಿಕೆ.
ಕೊರೊನಾದಿಂದ ಖಿನ್ನತೆ, ಒತ್ತಡಗಳಿಗೆ ಒಳಗಾಗಿರುವ ಜನರು ಪ್ರಾರ್ಥನೆ ಮತ್ತು ಧ್ಯಾನಕ್ಕೆ ಮೊರೆ ಹೋಗಬೇಕು. ಇದರಿಂದ ಪಾಸಿಟಿವ್ ಎನರ್ಜಿ ಹೊರಹೊಮ್ಮುತ್ತದೆ.