ಬೆಂಗಳೂರು: ನೆರೆ ರಾಜ್ಯ ಕೇರಳದಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಕೇಂದ್ರ ಸರ್ಕಾರದ ಆರೋಗ್ಯ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲ ರಾಜ್ಯ ಸರ್ಕಾರಗಳ ಮುಖ್ಯ ಕಾರ್ಯದರ್ಶಿಗಳ ಜತೆಗೆ ಗುರುವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಇಲ್ಲಿನ ವೈದ್ಯರ ಜತೆಗೆ ಸಭೆ ನಡೆಸಿ,ಶಂಕಿತರಿಗೆ ಅಗತ್ಯ ಚಿಕಿತ್ಸೆ ಒದಗಿಸುವಂತೆ ಸೂಚಿಸಿದರು.ರಾಜೀವ್ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ (ಆರ್ಜಿಐಸಿಡಿ) ಸೋಂಕು ತಗುಲಿದ ಶಂಕೆ ಇರುವ ವ್ಯಕ್ತಿಗಳಿಗೆ ಚಿಕಿತ್ಸೆ ನೀಡಲೆಂದೇ 15ಹಾಸಿಗೆಗಳ ಪ್ರತ್ಯೇಕ ವಾರ್ಡ್ ಮೀಸಲಿಡಲಾಗಿದೆ.ಹೆಚ್ಚುವರಿಯಾಗಿಜಯನಗರ ಜನರಲ್ ಆಸ್ಪತ್ರೆ ಮತ್ತು ಇಂದಿರಾನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಲ್ಲೂ ತಲಾ 5 ಹಾಸಿಗೆಗಳ ಪ್ರತ್ಯೇಕ ವಾರ್ಡ್ ತೆರೆಯಲು ಸೂಚಿಸಿದರು.
ಚಿಕಿತ್ಸೆ ಪಡೆದುಕೊಳ್ಳುತ್ತಿರುವವರ ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸುವ ವ್ಯವಸ್ಥೆಪುಣೆಯ ರಾಷ್ಟ್ರೀಯ ರೋಗಸೂಕ್ಷ್ಮಾಣು (ವೈರಾಲಜಿ) ಅಧ್ಯಯನ ಸಂಸ್ಥೆಯಲ್ಲಿ ಮಾತ್ರವಿದೆ.ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದ13 ಶಂಕಿತ ವ್ಯಕ್ತಿಗಳರಕ್ತದ ಮಾದರಿಗಳಲ್ಲಿ, ನಾಲ್ಕು ಮಂದಿಗಳ ವರದಿ ಬಂದಿದ್ದು, ಅವರಲ್ಲಿ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ.ಮುಂದಿನ ಎರಡು ದಿನಗಳಲ್ಲಿ ನಗರದ ಎನ್ಐವಿ ಕೇಂದ್ರ ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಶಂಕಿತ ವ್ಯಕ್ತಿಗಳ ರಕ್ತದ ಮಾದರಿಯನ್ನು ಪರೀಕ್ಷೆ ಮಾಡುವ ವ್ಯವಸ್ಥೆ ಪ್ರಾರಂಭವಾಗಲಿದೆ.
ರೋಗಿಗಳಿಂದ ಆರೋಪ: ಆರ್ಜಿಐಸಿಡಿಗೆ ದಾಖಲಾಗಿರುವ ರೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರುವಾರ್ಡ್ನಲ್ಲಿ ಸೂಕ್ತ ಸೌಕರ್ಯವಿಲ್ಲ ಎಂದು ಆರೋಪಿಸಿ, ಮನೆಗೆ ಕಳುಹಿಸುವಂತೆ ವೈದ್ಯರಲ್ಲಿ ಕೇಳಿಕೊಂಡಿದ್ದರು. ಪ್ರತ್ಯೇಕ ಶೌಚಾಲಯ, ಸ್ನಾನದ ಕೋಣೆ ಹಾಗೂ ಪ್ರತ್ಯೇಕ ಸಾಮಗ್ರಿಗಳು ಇರದ ಕಾರಣ ಶಂಕಿತ ವ್ಯಕ್ತಿಗಳು ಸೋಂಕು ತಗಲುವ ಆತಂಕ ವ್ಯಕ್ತಪಡಿಸಿದ್ದರು. ಹಾಗಾಗಿ ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಲು ಇಲಾಖೆ ಅನುಮತಿ ನೀಡಿದೆ. ಇದರಿಂದಾಗಿ ಶಂಕಿತ 9 ಮಂದಿಯಲ್ಲಿ6 ಮಂದಿ ವರದಿ ಬರುವ ಮುನ್ನವೇ ಮನೆಗೆ ತೆರಳಿದರು.
ನಾರಾಯಣ ಹೃದಯಾಲಯ, ಅಪೊಲೊ, ಮಣಿಪಾಲ್ ಹಾಗೂ ಫೋರ್ಟಿಸ್ ಆಸ್ಪತ್ರೆಗಳಲ್ಲೂ ಪ್ರತ್ಯೇಕ ವಾರ್ಡ್ ವ್ಯವಸ್ಥೆ ಮಾಡಲಾಗಿದೆ.
‘ಸೋಂಕಿಗೆ ನಿಗದಿತ ಚಿಕಿತ್ಸೆಯಿಲ್ಲ’
‘ಕೊರೊನಾ ಸೋಂಕಿಗೆ ಈವರೆಗೂ ಎಲ್ಲಿಯೂ ನಿಗದಿತ ಚಿಕಿತ್ಸೆಯಿಲ್ಲ. ಹಾಗಾಗಿ ಸೋಂಕು ತಗುಲಿದವರಿಗೆ ಪೂರಕ ಚಿಕಿತ್ಸೆಯನ್ನು ಒದಗಿಸಬೇಕಾಗುತ್ತದೆ. ದೇಹದಲ್ಲಿರೋಗ ನಿರೋಧಕ ಶಕ್ತಿ ಪ್ರಬಲವಾಗಿದ್ದರೆ ರೋಗ ಕಡಿಮೆ ಆಗುತ್ತದೆ’ ಎಂದುಆರ್ಜಿಐಸಿಡಿ ನಿರ್ದೇಶಕ ಡಾ.ಸಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಎಚ್1ಎನ್1 ಸೋಂಕಿಗೆ ಚಿಕಿತ್ಸೆ ನೀಡಿದ ಮಾದರಿಯಲ್ಲಿಯೇ ಈ ಸೋಂಕಿಗೂ ಚಿಕಿತ್ಸೆ ಒದಗಿಸುತ್ತೇವೆ.ಮೂತ್ರಪಿಂಡ ಸಮಸ್ಯೆ, ಕ್ಯಾನ್ಸರ್, ಹೃದಯ, ಮಧುಮೇಹ ಸಮಸ್ಯೆ ಎದುರಿಸುತ್ತಿರುವವರು ಹಾಗೂ 40 ವರ್ಷ ಮೇಲ್ಪಟ್ಟವರಿಗೆ ಈ ಸೋಂಕು ತಗುಲಿದಲ್ಲಿ ಪೂರಕ ಚಿಕಿತ್ಸೆಯಿಂದಲೂ ಉತ್ತಮ ಫಲಿತಾಂಶವನ್ನು ನಿರೀಕ್ಷಿಸಲು ಸಾಧ್ಯ ಇರುವುದಿಲ್ಲ. ಹಾಗಾಗಿ ಅಂತಹವರು ಈ ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸಬೇಕು.ಈ ಸೋಂಕಿಗೆ ಚಿಕಿತ್ಸೆ ಒದಗಿಸಲು ಅಗತ್ಯ ಸಿದ್ಧತೆಗಳನ್ನು ಆಸ್ಪತ್ರೆಯಲ್ಲಿ ಮಾಡಿಕೊಂಡಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.