ಬೆಂಗಳೂರು: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮೆಘಾ ಎಂಜಿನಿಯರಿಂಗ್ ಆಂಡ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಎಂಇಐಎಲ್) ಸಂಸ್ಥೆಯು ₹ 2 ಕೋಟಿ ದೇಣಿಗೆ ನೀಡಿದೆ.
ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ ಉದ್ಭವಿಸಿರುವ ಸಂದಿಗ್ಧ ಸ್ಥಿತಿಗಳನ್ನು ನಿಭಾಯಿಸಲು ಹಾಗೂ ಸೋಂಕು ಪೀಡಿತರ ಚಿಕಿತ್ಸೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸ್ಥೆಯು ಶುಕ್ರವಾರ ಈ ನೆರವು ನೀಡಿದೆ.
ಕರ್ನಾಟಕ ಮಾತ್ರವಲ್ಲದೆ ಒಡಿಶಾ, ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಿಗೂ ಸಂಸ್ಥೆ ಸಹಾಯ ಹಸ್ತ ನೀಡಿದೆ.
1.80 ಲಕ್ಷ ಮಂದಿಗೆ ಊಟ
ಬೆಂಗಳೂರು: ನಗರದಲ್ಲಿರುವ ಕೂಲಿ ಕಾರ್ಮಿಕರು, ಬೀದಿ ವ್ಯಾಪಾರಿಗಳು ಸೇರಿದಂತೆ ಒಟ್ಟು 1.80 ಲಕ್ಷ ಮಂದಿಗೆ ಬಿಬಿಎಂಪಿ ವತಿಯಿಂದ ಶನಿವಾರ ಊಟ ಪೂರೈಸಲಾಗಿದೆ.
‘ಬಡಬಗ್ಗರಿಗೆ ಪಾಲಿಕೆ ವತಿಯಿಂದಲೇ ಊಟದ ಪೊಟ್ಟಣಗಳನ್ನು ಒದಗಿಸಲಾಗುತ್ತಿದೆ. ಗುರುವಾರ 60 ಸಾವಿರ ಮಂದಿಗೆ, ಶುಕ್ರವಾರ 96 ಸಾವಿರ ಮಂದಿಗೆ ಊಟ ನೀಡಿದ್ದೆವು. ಕಡು ಬಡವರು ಊಟಕ್ಕಾಗಿ ಉಚಿತ ಸಹಾಯವಾಣಿ 155214ಕ್ಕೆ ಕರೆ ಮಾಡಬಹುದು’ ಎಂದು ಪಾಲಿಕೆ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.
ಉಚಿತ ವಸತಿ, ಊಟದ ವ್ಯವಸ್ಥೆ
ಕಂಪ್ಲಿ: ಬೆಂಗಳೂರಿಗೆ ವಲಸೆ ಹೋಗಿರುವ ಕಂಪ್ಲಿ ಕ್ಷೇತ್ರದ ಕಾರ್ಮಿಕರಿಗೆ ನಗರದಲ್ಲಿಯೇ ವಸತಿ, ಊಟದ ವ್ಯವಸ್ಥೆ ಉಚಿತವಾಗಿ ಕಲ್ಪಿಸಲಾಗಿದೆ ಎಂದು ಶಾಸಕ ಜೆ.ಎನ್. ಗಣೇಶ್ ತಿಳಿಸಿದರು.
ಬೆಂಗಳೂರಿನ ವೈಷ್ಣವಿ ಟ್ರಾವೆಲ್ಸ್ ಕಚೇರಿ ಮಾಲೀಕ ಕೆ.ವಿಷ್ಣುವರ್ಧನ ರೆಡ್ಡಿ ಅವರನ್ನು ಸಂಪರ್ಕಿಸಿದಲ್ಲಿ ಏಪ್ರಿಲ್ 14ರ ವರೆಗೆ ಸೌಲಭ್ಯ ಕಲ್ಪಿಸುತ್ತಾರೆ ಎಂದರು. ಮಾಹಿತಿ: 78997 41923
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.