ಬೆಂಗಳೂರು: ‘ಕೊರೊನಾ ಸೋಂಕು ರಾಜ್ಯದಲ್ಲಿ ಕಾಣಿಸಿಕೊಂಡಾಗಿನಿಂದ ಅದರ ನಿಯಂತ್ರಣದ ಹೆಸರಿನಲ್ಲಿ ಬಿಜೆಪಿ ಸರ್ಕಾರ ಭ್ರಷ್ಟಾಚಾರ ಮಾಡುತ್ತಿದೆ’ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ಆನಂದರಾವ್ ವೃತ್ತದ ಗಾಂಧಿ ಪ್ರತಿಮೆ ಎದುರು ಸೇರಿದ್ದ ಕಾರ್ಯಕರ್ತರು, ‘ಕೊರೊನಾ ಸಮಯದಲ್ಲೇ ಬಿಜೆಪಿ ಸರ್ಕಾರ ಹಣ ಲೂಟಿ ಮಾಡುತ್ತಿದೆ’ ಎಂಬ ಘೋಷಣಾ ಫಲಕ ಪ್ರದರ್ಶಿಸಿದರು.
ಬಿಜೆಪಿ ಸಚಿವರ ಹಾಗೂ ಮುಖಂಡರ ಮುಖವಾಡ ಧರಿಸಿ ರಸ್ತೆಯಲ್ಲೇ ಮಲಗಿ ವ್ಯಂಗ್ಯವಾಗಿ ಘೋಷಣೆ ಕೂಗಿದರು.
‘ಬಿಜೆಪಿ ಸರ್ಕಾರ, ಕೊರೊನಾ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಲೂಟಿ ಮಾಡುತ್ತಿದೆ. ತಗಡು, ಹಾಸಿಗೆ, ದಿಂಬು. ವೆಂಟಿಲೇಟರ್... ಹೀಗೆ ಹಲವು ವಸ್ತುಗಳ ಖರೀದಿಯಲ್ಲೂ ಭ್ರಷ್ಟಾಚಾರ ನಡೆದಿದೆ. ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳೆಲ್ಲರೂ ಇದರಲ್ಲಿ ಭಾಗಿಯಾಗಿದ್ದಾರೆ’ ಎಂದು ಪ್ರತಿಭಟನಕಾರರು ದೂರಿದರು.
‘ಸೀಲ್ಡೌನ್ ಹೆಸರಿನಲ್ಲೂ ಭ್ರಷ್ಟಾಚಾರ ನಡೆದಿದೆ. ಖಜಾನೆಯಲ್ಲಿ ಹಣವಿಲ್ಲವೆಂಬ ಕಾರಣ ನೀಡುತ್ತಿರುವ ಬಿಜೆಪಿ ಸರ್ಕಾರ, ರಾಜ್ಯದ ಹಲವೆಡೆ ಇರುವ ಸರ್ಕಾರಿ ಭೂಮಿ ಹಾಗೂ ಸ್ವತ್ತನ್ನು ಮಾರಾಟ ಮಾಡಲು ಮುಂದಾಗಿರುವುದು ಖಂಡನೀಯ. ಇಂಥ ಸರ್ಕಾರದ ವಿರುದ್ಧ ನಮ್ಮ ಪ್ರತಿಭಟನೆ ನಿರಂತರ’ ಎಂದೂ ಪ್ರತಿಭಟನನಿರತ ಕಾಂಗ್ರೆಸ್ ಕಾರ್ಯಕರ್ತರು ತಿಳಿಸಿದರು.