ಬೆಂಗಳೂರು: ಅಲಯನ್ಸ್ ವಿಶ್ವ ವಿದ್ಯಾಲಯದ ಮಾಜಿ ಕುಲಪತಿ ಅಯ್ಯಪ್ಪ ದೊರೆ ಸುಪಾರಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಧೀರ್ ಅಂಗೂರ್ ಅವರಿಗೆ ಇಲ್ಲಿನ ಸೆಷನ್ಸ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ.
ಈ ಕುರಿತಂತೆ ಪ್ರಕರಣದ ಒಂದನೇ ಆರೋಪಿ ಸುಧೀರ್ ಅಂಗೂರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು 56ನೇ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಕೆ.ನಾರಾಯಣ ಪ್ರಸಾದ್ ವಜಾಗೊಳಿಸಿದ್ದಾರೆ.
ವಜಾಕ್ಕೆ ನೀಡಿರುವ ಕಾರಣಗಳು:
*ಅಯ್ಯಪ್ಪ ಕೊಲೆಯಾಗುವ ದಿನವೇ, ಎರಡನೇ ಆರೋಪಿ ಸೂರಜ್ ಸಿಂಗ್ಗೆ ಸುಧೀರ್ ಅಂಗೂರ್ ₹ 50 ಸಾವಿರ ಪಾವತಿ ಮಾಡಿರುವುದು ಸುಪಾರಿ ಕೊಲೆಯ ಆರೋಪಕ್ಕೆ ಪುಷ್ಟಿ ನೀಡುತ್ತದೆ.
*ಸುಪಾರಿ ಕೊಲೆ ಆರೋಪಕ್ಕೆ ಇಂಬು ನೀಡುವಂತೆ ಅಯ್ಯಪ್ಪ ಅವರ ಚಲನವಲನಗಳನ್ನು ಆರೋಪಿಗಳು, ಸುಧೀರ್ ಅಂಗೂರ್ ನಿರ್ದೇಶನದ ಮೇರೆಗೆ 2019ರ ಮಾರ್ಚ್ ತಿಂಗಳಿನಿಂದ ಅಕ್ಟೋಬರ್ವರೆಗೆ ಬೆನ್ನು ಹತ್ತಿ ಮಾಹಿತಿ ಸಂಗ್ರಹಿಸಿದ್ದರು ಎಂಬ ವಾದ ಸರಣಿ ಗಮನಾರ್ಹ.