ಬೆಂಗಳೂರು: ಬ್ರಿಟನ್ನಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳದೆ ಹೊರ ರಾಜ್ಯಗಳಿಗೆ ತೆರಳಿರುವ ಪ್ರಯಾಣಿಕರ ಬಗ್ಗೆ ಆಯಾ ರಾಜ್ಯಗಳಿಗೆ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ಈ ಆದೇಶ ಹೊರಡಿಸಿದೆ. ‘1,138 ಪ್ರಯಾಣಿಕರನ್ನು ಆರ್ಟಿ–ಪಿಸಿಆರ್ ಪರೀಕ್ಷೆಗೆ ಒಳಪಡಿಸದೆ ಬೇರೆ ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶ ನೀಡಿದ್ದೇಕೆ’ ಎಂದು ಪೀಠ ಪ್ರಶ್ನಿಸಿತು.
‘ಬಹುತೇಕ ಪ್ರಯಾಣಿಕರು ಡಿಸೆಂಬರ್ 7ರಿಂದ 21ರ ನಡುವೆ ಬಂದವರು’ ಎಂದು ಸರ್ಕಾರದ ಪರ ವಕೀಲರು ಮಾಹಿತಿ ನೀಡಿದರು. ‘ಕೋವಿಡ್ ಪರೀಕ್ಷೆಗೆ ಒಳಪಡದೆ ಹೋಗಿರುವ ಪ್ರಯಾಣಿಕರ ವಿಳಾಸ ಸಹಿತ ಮಾಹಿತಿಯನ್ನು ಆಯಾ ರಾಜ್ಯಗಳಿಗೆ ಕೂಡಲೇ ರವಾನಿಸಬೇಕು’ ಎಂದು ಪೀಠ ಆದೇಶಿಸಿತು.
‘ಬ್ರಿಟನ್ನಿಂದ ವಾಪಸ್ ಬಂದವರಲ್ಲಿ ರಾಜ್ಯದ 600 ಪ್ರಯಾಣಿಕರಿಗೆ ಇನ್ನೂ ಆರ್ಟಿ–ಪಿಸಿಆರ್ ಪರೀಕ್ಷೆ ನಡೆಸದಿರುವುದೇಕೆ’ ಎಂದು ಪ್ರಶ್ನಿಸಿತು. ‘ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿ 10 ವರ್ಷದ ಒಳಗಿನ ಮಕ್ಕಳೇ ಇದ್ದಾರೆ. ಹೀಗಾಗಿ ಪರೀಕ್ಷೆ ನಡೆಸಿಲ್ಲ’ ಎಂದು ವಕೀಲರು ಸ್ಪಷ್ಟಪಡಿಸಿದರು.
‘ಈ ಸಂಬಂಧ ಲಿಖಿತ ಸ್ಪಷ್ಟನೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು’ ಎಂದು ತಿಳಿಸಿದ ಪೀಠ, ವಿಚಾರಣೆಯನ್ನು ಜ.27ಕ್ಕೆ ಮುಂದೂಡಿತು.