‘ಬಿಬಿಎಂಪಿಯ ಚುನಾಯಿತ ಕಾಲಾವಧಿ 2020ರ ಸೆ.1ರಂದು ಕೊನೆಯಾಗಿದೆ. ಅದಕ್ಕೂ ಮೊದಲು ಚುನಾವಣೆ ನಡೆಸಿ, ಚುನಾಯಿತ ಕೌನ್ಸಿಲ್ ರಚಿಸಲು ಅವಕಾಶ ನೀಡಬೇಕಿತ್ತು. ಆದರೆ, ಸರ್ಕಾರವು ತನ್ನ ರಾಜಕೀಯ ಹಿತಾಸಕ್ತಿಗಾಗಿ ಚುನಾವಣೆ ನಡೆಸದೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿತ್ತು. 2021ರ ಮಾ.10ಕ್ಕೆ ಆಡಳಿತಾಧಿಕಾರಿಯ ಅವಧಿ ಮುಕ್ತಾಯಗೊಂಡಿದೆ. ಈಗ ಚುನಾವಣೆಯನ್ನೂ ನಡೆಸದೆ, ಆಡಳಿತಾಧಿಕಾರಿಯ ಅವಧಿಯನ್ನೂ ವಿಸ್ತರಿಸದೆ ಬಿಬಿಎಂಪಿ ಆಡಳಿತವನ್ನು ಅತಂತ್ರಗೊಳಿಸಿದೆ. ಇದಕ್ಕೆ ಸರ್ಕಾರದ ದುರಾಡಳಿತವೇ ಕಾರಣ’ ಎಂದು ಸಮಿತಿ ಕಾರ್ಯದರ್ಶಿ ಕೆ.ಎನ್. ಉಮೇಶ್ ಮತ್ತು ಎನ್. ಪ್ರತಾಪ್ ಸಿಂಹ ತಿಳಿಸಿದ್ದಾರೆ.