ಬೆಂಗಳೂರು: ದೇಶದಲ್ಲಿ ಭಯದ ವಾತಾವರಣ ನಿರ್ಮಿಸಿ, ಜನ ಪ್ರತಿಭಟನೆ ಮಾಡುವಂತೆ ಮಾಡಿದ್ದೇ ಕೇಂದ್ರ ಸರ್ಕಾರದ ಒಂದು ವರ್ಷದ ಸಾಧನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆಟ್ರೋಲ್ ಬೆಲೆ ಜಾಗತಿಕ ಮಟ್ಟದಲ್ಲಿ ಭಾರಿ ಪ್ರಮಾಣದಲ್ಲಿ ಕುಸಿದಿದ್ದರೂ, ಅದರ ಲಾಭವನ್ನು ಜನರಿಗೆ ಸಿಗದಂತೆ ಮಾಡಲಾಗಿದೆ. ಆರ್ಥಿಕ ವಿಷಯದಲ್ಲೂ ಸರ್ಕಾರ ಕೊರೊನಾ ಬರುವುದಕ್ಕೆ ಮೊದಲೇ ಭಾರಿ ವಿಫಲವಾಗಿತ್ತು ಎಂದರು.
ನಿರುದ್ಯೋಗದ ಪ್ರಮಾಣ ಶೇ 24ರಷ್ಟಿದೆ. ಜಿಡಿಪಿ ಪ್ರಮಾಣ ಸಹ ಭಾರಿ ಕುಸಿತ ಕಂಡಿದೆ ಎಂದು ದೂರಿದರು.
ರೈತರು, ಸಣ್ಣ ಕೈಗಾರಿಕೆಗಳಿಗೆ ನಿರ್ಲಕ್ಷ್ಯ ತೋರಿದೆ. ಒಟ್ಟಾರೆಇಡೀ ದೇಶ ಅಭಿವೃದ್ಧಿಯಲ್ಲಿ ಹಿಂದೆ ಉಳಿದಿದೆ. ಯಾವುದೇ ಸ್ಪಷ್ಟ ಯೋಜನೆಯೂ ಇಲ್ಲ. ಸಂಸದರ ಮಾದರಿ ಗ್ರಾಮಕ್ಕೆ ದುಡ್ಡನ್ನೇ ಕೊಟ್ಟಿಲ್ಲ ಎಂದರು.
ಕೊರೊನಾ ನಿಭಾಯಿಸುವಲ್ಲಿ ವಿಫಲ: ಲಾಕ್ಡೌನ್ ಪೂರ್ಣ ವಿಫಲವಾಗಿದೆ. ನಾವು ಸಹ ಅವರಿಗೆ ಸಹಕಾರ ಕೊಟ್ಟಿದ್ದೇವೆ. ಯಾವ ವಿಷಯದಲ್ಲೂ ಮಾತುಕತೆ ಇಲ್ಲ. ವ್ಯವಹಾರದ ಜ್ಞಾನ ಇಲ್ಲದವರಿಂದಾಗಿ ಈ ಪರಿಸ್ಥಿತಿ ಬಂದಿದೆ ಎಂದು ಟೀಕಿಸಿದರು.