ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾನಂಗಳದಲ್ಲಿ ಮತದಾನ ಜಾಗೃತಿ ಅಭಿಯಾನ

ಪ್ಯಾರಾ ಮೋಟರಿಂಗ್ ಮೂಲಕ ನಾಗರಿಕರಿಗೆ ಮತದಾನ ಅರಿವು ಮೂಡಿಸಲು ವಿಭಿನ್ನ ಪ್ರಯತ್ನ
Last Updated 15 ಏಪ್ರಿಲ್ 2018, 8:08 IST
ಅಕ್ಷರ ಗಾತ್ರ

ದಾವಣಗೆರೆ: ಮತದಾನದ ಪ್ರಮಾಣವನ್ನು ಹೆಚ್ಚಿಸಲು, ಮತಗಟ್ಟೆಯತ್ತ ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಿಭಿನ್ನ ತಂತ್ರಗಳನ್ನು ಮಾಡುತ್ತಿದೆ. ಇದರ ಭಾಗವಾಗಿ ಶನಿವಾರ ನಗರದ ಹೈಸ್ಕೂಲ್‌ ಮೈದಾನದಲ್ಲಿ ‘ಪ್ಯಾರಾ ಮೋಟರಿಂಗ್’ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 8 ಗಂಟೆಗೆ ಫ್ಲೆಮಿಂಗೊ ಅಲ್ಟ್ರಾಲೈಟ್‌ ಏವಿಯೇಷನ್‌ನ ಕ್ಯಾಪ್ಟನ್‌ ನಿತ್ಯಾನಂದ ನಾಯ್ಕವಾಡಿ ಬೆನ್ನಿಗೆ ಮೋಟರ್‌ ಕಟ್ಟಿಕೊಂಡು ಬಾನಂಗಳಕ್ಕೆ ಜಿಗಿದರು. ಈ ಸಂದರ್ಭ ಸಾರ್ವಜನಿಕರು ಆಶ್ಚರ್ಯಚಕಿತರಾಗಿ ಈ ಸಾಹಸವನ್ನು ವೀಕ್ಷಿಸಿದರು.

ಗಾಳಿಯನ್ನು ಸೀಳುತ್ತಾ ಮುಗಿಲೆತ್ತರಕ್ಕೆ ಹಾರಿದ ನಿತ್ಯಾನಂದ ಕೆಲಹೊತ್ತು ಆಕಾಶದಲ್ಲೇ ಹಾರಾಡುತ್ತಾ ಸಾರ್ವಜನಿಕರ ಗಮನವನ್ನು ಸೆಳೆದರು. ಬಳಿಕ 500 ಅಡಿಗಳಷ್ಟು ಮೇಲಕ್ಕೆ ಹೋಗಿ ಮತದಾನದ ಕುರಿತು ಅರಿವು ಮೂಡಿಸುವ ಕರಪತ್ರಗಳನ್ನು ಗಾಳಿಯಲ್ಲಿ ತೂರಿಬಿಟ್ಟರು. ಮೈದಾನದ ತುಂಬೆಲ್ಲ ಕರಪತ್ರಗಳು ಹರಡಿಕೊಂಡವು.

‘ನಾವು ನಮ್ಮ ಅಮೂಲ್ಯ ಮತವನ್ನು ತಪ್ಪದೇ ಹಾಕೋಣ’, ‘ಸುಭದ್ರ ಸರ್ಕಾರ ರಚಿಸೋಣ’ ‘ಬನ್ನಿ ಎಲ್ಲರೂ ತಪ್ಪದೆ ಮತ ಚಲಾಯಿಸೋಣ’ ಹೀಗೆ ಮತದಾನ ಪ್ರೇರೇಪಿಸುವ ಸಾಲುಗಳು ಹಾಗೂ ಚಿತ್ರಗಳನ್ನು ಅವು ಒಳಗೊಂಡಿದ್ದವು.

ಬಳಿಕ ನಗರ ಪ್ರದಕ್ಷಿಣಿ ಆರಂಭಿಸಿದ ಕ್ಯಾಪ್ಟನ್‌ ನಿತ್ಯಾನಂದ, ಜನದಟ್ಟಣೆ ಪ್ರದೇಶಗಳತ್ತ ಸಾಗಿ ಕರಪತ್ರಗಳನ್ನು ಎರಚಿದರು. ಸುಮಾರು ಒಂದೂವರೆ ಗಂಟೆ ಗಾಳಿಯಲ್ಲೇ ತೇಲಾಡುತ್ತಾ ಮತದಾನದ ಜಾಗೃತಿ ಮೂಡಿಸಿದರು. 9.45ರ ಸುಮಾರಿಗೆ ಮರಳಿ ಹೈಸ್ಕೂಲ್‌ ಮೈದಾನ ತಲುಪಿದರು. ಈ ಸಂದರ್ಭ ಎಲ್ಲರೂ ಚಪ್ಪಾಳೆಯ ಮೂಲಕ ಅವರನ್ನು ಸ್ವಾಗತಿಸಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ
ಎಸ್‌. ಅಶ್ವತಿ ಮಾತನಾಡಿ, ಮತದಾರರನ್ನು ಸೆಳೆಯಲು ಚುನಾವಣಾ ಆಯೋಗ ವಿಭಿನ್ನ ಪ್ರಯೋಗಗಳನ್ನು ಮಾಡುತ್ತಿದ್ದು, ಪ್ಯಾರಾ ಮೋಟರಿಂಗ್ ಕೂಡ ಅದರ ಭಾಗವಾಗಿದೆ ಎಂದರು.

ಈಗಾಗಲೇ ಗ್ರಾಮ ಹಾಗೂ ತಾಲ್ಲೂಕು ಮಟ್ಟದಲ್ಲಿ ಶಾಲಾ-ಕಾಲೇಜು ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ, ಮಹಿಳೆಯರಿಗೆ ರಂಗೋಲಿ ಸ್ಪರ್ಧೆ, ಬೈಕ್‌ ರ‍್ಯಾಲಿ, ಜಾಥಾ ನಡೆಸಲಾಗಿದೆ. ಕರಪತ್ರ ಮತ್ತು ಪೋಸ್ಟರ್‌ಗಳನ್ನು ಬಳಸಿಕೊಂಡು ಸ್ತ್ರೀಶಕ್ತಿ ಗುಂಪುಗಳ ಮೂಲಕ ಜಾಗೃತಿ ಮೂಡಿಸಲಾಗಿದೆ. ಅಂಗವಿಕಲರು ಮತದಾನ ಮಾಡಲು ಅನುಕೂಲವಾಗುವಂತೆ ಮತಗಟ್ಟೆಗಳಲ್ಲಿ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗುವುದು ಎಂದರು.

ಮುಂಬೈನ ನಿತ್ಯಾನಂದ ಪ್ಯಾರಾ ಮೋಟರಿಂಗ್‌ ಕ್ರೀಡೆಯಲ್ಲಿ ತಜ್ಞರಾಗಿದ್ದು, ಈಗಾಗಲೇ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಆಯೋಗದ ಮನವಿ ಮೇರೆಗೆ ಪ್ರದರ್ಶನ ನೀಡಿದ್ದಾರೆ. ರಾಜ್ಯ ಚುನಾವಣೆಯಲ್ಲೂ ಅವರ ಸೇವೆಯನ್ನು ಬಳಸಿಕೊಳ್ಳಲಾಗಿದ್ದು, ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದರು.

ನಿತ್ಯಾನಂದ ಒಂದೂವರೆ ಗಂಟೆಯ ಅವಧಿಯಲ್ಲಿ ಇಡೀ ನಗರವನ್ನು ಪ್ರದಕ್ಷಿಣೆ ಹಾಕಿದ್ದು, ಕರಪತ್ರಗಳನ್ನು ಎರಚಿದ್ದಾರೆ. ಒಟ್ಟಾರೆ ಮತದಾರರನ್ನು ಸೆಳೆಯುವುದು ಈ ಕಾರ್ಯಕ್ರಮದ ಹಿಂದಿನ ಉದ್ದೇಶವಾಗಿದೆ ಎಂದರು.

ಮತದಾನದಿಂದ ಯಾರೂ ಹೊರಗುಳಿಯಬಾರದು ಎಂಬುದು ಚುನಾವಣಾ ಆಯೋಗದ ಉದ್ದೇಶವಾಗಿದ್ದು, ಅದನ್ನು ಸಾಕಾರಗೊಳಿಸಲು ಶ್ರಮಿಸುತ್ತಿದ್ದೇವೆ. ಚುನಾವಣೆಯವರೆಗೂ ಜಾಗೃತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ ಎಂದರು.

ಜಿಲ್ಲಾ ಪಂಚಾಯ್ತಿ ಸಿಎಸ್‌ ಷಡಕ್ಷರಪ್ಪ, ತಾಲ್ಲೂಕು ಪಂಚಾಯ್ತಿ ಇಒ ಎಲ್‌.ಪ್ರಭುದೇವ್‌, ವಾರ್ತಾಧಿಕಾರಿ ಅಶೋಕ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಸಿಬ್ಬಂದಿ, ಶಿಕ್ಷಕರು, ಪಿಡಿಒಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಖುಷಿ ಕೊಡುವ ಸಾಹಸಮಯ ಕ್ರೀಡೆ’

ಪ್ಯಾರಾ ಮೋಟರಿಂಗ್ ಸಾಹಸಮಯ ಕ್ರೀಡೆಯಾಗಿದ್ದು, ಹೆಚ್ಚು ಖುಷಿ ಕೊಡುತ್ತದೆ. ಜನರನ್ನೂ ಆಕರ್ಷಿಸುತ್ತದೆ. ಹಾಗಾಗಿ, ಚುನಾವಣಾ ಆಯೋಗ ಮತದಾರರನ್ನು ಸೆಳೆಯಲು ಈ ಕ್ರೀಡೆಯನ್ನು ಬಳಸಿಕೊಂಡಿದೆ ಎಂದು ಕ್ಯಾಪ್ಟನ್‌ ನಿತ್ಯಾನಂದ ‘ಪ್ರಜಾವಾಣಿ’ಗೆ ತಿಳಿಸಿದರು.

ಗುಜರಾತ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ಪ್ಯಾರಾ ಮೋಟರಿಂಗ್ ಮೂಲಕ ಮತದಾರರನ್ನು ಆಕರ್ಷಿಸಲಾಗಿತ್ತು. ಈಗ ಕರ್ನಾಟಕ ಚುನಾವಣೆಯಲ್ಲೂ ಬಳಸಿಕೊಳ್ಳಲಾಗಿದೆ. ಈಗಾಗಲೇ ಉಡುಪಿ, ಚಿತ್ರದುರ್ಗ, ಧಾರವಾಡಗಳಲ್ಲಿ ಪ್ರದರ್ಶನ ನೀಡಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಕಾರ್ಯಕ್ರಮ ಇದೆ ಎಂದರು.

‘ಪ್ಯಾರಾಮೋಟರ್’ ಪೆಟ್ರೋಲ್‌ನಿಂದ ಕಾರ್ಯನಿರ್ವಹಿಸಲಿದ್ದು, 12 ಲೀಟರ್ ಸಾಮರ್ಥ್ಯದ ಟ್ಯಾಂಕ್ ಹೊಂದಿದೆ. ಒಮ್ಮೆ ಭರ್ತಿ ಮಾಡಿದರೆ 3 ಗಂಟೆ ಕಾಲ ಆಗಸದಲ್ಲಿ ಹಾರಬಹುದು. ಮೋಟರ್ ನಿಯಂತ್ರಣಕ್ಕೆ ಎರಡು ಬ್ರೇಕ್ ಗಳಿದ್ದು, ಗ್ಲೈಡರ್ ಸುತ್ತುವುದರಿಂದ ಎತ್ತರಕ್ಕೆ ಹಾರಲು ನೆರವಾಗುತ್ತದೆ. 1 ಸಾವಿರ ಅಡಿಯವರೆಗೂ ಮೇಲಕ್ಕೆ ಹೋಗಿ, ಬಳಿಕ 500 ಅಡಿಯಿಂದ ಕರಪತ್ರ ಎರಚಲಾಯಿತು ಎಂದರು.

ಆಸಕ್ತಿಯಿದ್ದವರು ಪ್ಯಾರಾ ಮೋಟರಿಂಗ್ ಕಲಿಯಬಹುದು. ಮುಂಬೈನಲ್ಲಿ ‘ಫ್ಲಮಿಂಗೊ ಅಲ್ಟ್ರಾಲೈಟ್ ಏವಿಯೇಷನ್’ ಸಂಸ್ಥೆಯಿದ್ದು, ಪ್ಯಾರಾ ಗ್ಲೈಡಿಂಗ್, ಪ್ಯಾರಾ ಸೇಲಿಂಗ್, ಪ್ಯಾರಾ ಮೋಟರಿಂಗ್ ಬಗ್ಗೆ ತರಬೇತಿ ನೀಡುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT