ಬೆಂಗಳೂರು: ತಾನು ಕೆಲಸ ಮಾಡುತ್ತಿದ್ದ ಮನೆಯಿಂದಲೇ ₹15 ಲಕ್ಷ ಬೆಲೆಬಾಳುವ ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ.
ಶಂಕರಪ್ಪ (40) ಬಂಧಿತ. ಗಿರಿನಗರದ ಉದ್ಯಮಿಯೊಬ್ಬರ ಮನೆಯಲ್ಲಿ ಆರೋಪಿ ಕೆಲ ವರ್ಷಗಳಿಂದ ಮನೆಗೆಲಸ ಮಾಡುತ್ತಿದ್ದ.
ಜೂಜಾಡುವ ಚಟಕ್ಕೆ ಬಿದ್ದಿದ್ದ ಈತ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ 320 ಗ್ರಾಂ ಚಿನ್ನಾಭರಣ ಕದ್ದಿದ್ದ. ಹೊಸದುರ್ಗದಲ್ಲಿ ಆಭರಣಗಳನ್ನು ಅಡವಿಟ್ಟು ಅದರಿಂದ ಬಂದ ಹಣದಲ್ಲಿ ಜೂಜಾಡಿ ಸೋತಿದ್ದ.