ಬೆಂಗಳೂರು: ಗಾರೆ ಕೆಲಸ ಮಾಡುತ್ತಿದ್ದ ಕಾರ್ಮಿಕನನ್ನು ಅಪರಿಚಿತರು ಕೊಲೆ ಮಾಡಿರುವ ಘಟನೆ ವಿದ್ಯಾರಣ್ಯಪುರ ಠಾಣಾ ವ್ಯಾಪ್ತಿಯ ತಿಂಡ್ಲು ಬಳಿ ನಡೆದಿದೆ.
ಹುಬ್ಬಳ್ಳಿಯ ಪ್ರಕಾಶ್ (25) ಕೊಲೆಯಾದ ವ್ಯಕ್ತಿ. ಇವರು ಹಲವು ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ಗಾರೆ ಕೆಲಸ ಮಾಡಿಕೊಂಡಿದ್ದರು.
ತಿಂಡ್ಲು ಸಮೀಪದ ಸಪ್ತಗಿರಿ ಬಡಾವಣೆಯ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಗಾರೆ ಕೆಲಸ ಮಾಡುತ್ತಿದ್ದರು. ಇದರ ಸಮೀಪದಲ್ಲೇ ನಿರ್ಮಿಸಲಾಗಿದ್ದಕಾರ್ಮಿಕರ ಶೆಡ್ನಲ್ಲೇ ಪ್ರಕಾಶ್ ವಾಸವಿದ್ದರು.
ಮಂಗಳವಾರ ರಾತ್ರಿ ಪ್ರಕಾಶ್ ಹೊರಗೆ ಹೋಗಿದ್ದರು. ಮನೆಗೆ ವಾಪಸ್ ಆಗುತ್ತಿದ್ದಾಗ ಶೆಡ್ನ ಸಮೀಪದಲ್ಲೇ ಅಪರಿಚಿತರು ಇವರ ಮೇಲೆ ದಾಳಿ ನಡೆಸಿದ್ದಾರೆ. ಚಾಕುವಿನಿಂದ ಪ್ರಕಾಶ್ ಎದೆ ಹಾಗೂ ಹೊಟ್ಟೆಗೆ ಇರಿದು, ಪರಾರಿಯಾಗಿದ್ದಾರೆ. ಪ್ರಕಾಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.
‘ಬುಧವಾರ ಮುಂಜಾನೆ ದಾರಿಯಲ್ಲಿ ಹೋಗುವವರು ಪ್ರಕಾಶ್ ಮೃತದೇಹ ಕಂಡು ಪೊಲೀಸರಿಗೆ ಮಾಹಿತಿ ನೀಡಿದರು. ಘಟನೆ ನಡೆದ ಸ್ಥಳದಲ್ಲಿರುವಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ. ಪ್ರಕಾಶ್ ಒಬ್ಬರೇ ವಾಸವಿದ್ದರು. ಯಾವ ಕಾರಣಕ್ಕಾಗಿ ಕೊಲೆ ಮಾಡಲಾಗಿದೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ’ ಎಂದೂ ಹೇಳಿದರು.