ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜು ಹಾಗೂ ಸಾಫ್ಟ್ವೇರ್ ಕಂಪನಿ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅರೋಪದಡಿ ಮೂವರನ್ನು ಬಂಧಿಸಿರುವ ಸುದ್ದಗುಂಟೆಪಾಳ್ಯ ಪೊಲೀಸರು, 950 ಗ್ರಾಂ ಆ್ಯಷ್ ಆಯಿಲ್ ಹಾಗೂ 3 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.
ಬೆಂಗಳೂರಿನ ದೀಪುರಾಜ್ (36), ಆಂಧ್ರಪ್ರದೇಶದ ಸುರಕತ್ತಿ ಪ್ರಭಾಕರ್(36) ಹಾಗೂ ಕೋರ್ರ ಕಾಮರಾಜು (21) ಬಂಧಿತರು.
‘ಬಿ.ಜಿ. ರಸ್ತೆಯ ಐಟಿ ಕಂಪನಿಯೊಂದರ ಬಳಿ ಆರೋಪಿ ದೀಪುರಾಜ್ ಇದೇ 20ರಂದು ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆತನನ್ನು ವಿಚಾರಣೆ ನಡೆಸಿದಾಗ ಇನ್ನಿಬ್ಬರು ಆರೋಪಿಗಳ ಸುಳಿವು ಸಿಕ್ಕಿತು’ ಎಂದು ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಷಿ ತಿಳಿಸಿದರು.
‘ದೀಪುರಾಜ್ ನ್ಯಾಯಾಂಗ ಬಂಧನದಲ್ಲಿದ್ದಾನೆ. ಪ್ರಭಾಕರ್ ಹಾಗೂ ಕಾಮರಾಜು ಪೊಲೀಸರ ಕಸ್ಟಡಿಯಲ್ಲಿದ್ದು, ಅವರು ಗಾಂಜಾವನ್ನು ಎಲ್ಲಿಂದ ತರುತ್ತಿದ್ದರು ಎಂಬುದನ್ನು ತಿಳಿದುಕೊಳ್ಳಲು ತನಿಖೆ ಮುಂದುವರಿದಿದೆ’ ಎಂದು ಹೇಳಿದರು.