ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಕನ ಹತ್ಯೆ; ತಂದೆ ಮೇಲಿನ ದ್ವೇಷಕ್ಕೆ ಕೃತ್ಯ ಎಸಗಿರುವ ಶಂಕೆ

ಸಾರ್ವಜನಿಕ ಶೌಚಾಲಯದಲ್ಲಿ ಮೃತದೇಹ ಪತ್ತೆ
Last Updated 11 ಮಾರ್ಚ್ 2021, 22:07 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ದಾಪುರ ಠಾಣೆ ವ್ಯಾಪ್ತಿಯಲ್ಲಿ ಆಕಾಶ್ (19) ಎಂಬುವರನ್ನು ಹತ್ಯೆ ಮಾಡಲಾಗಿದ್ದು, ಅವರ ತಂದೆ ಮೇಲಿನ ದ್ವೇಷದಿಂದಾಗಿ ದುಷ್ಕರ್ಮಿಗಳು ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

‘ಸ್ಥಳೀಯ ನಿವಾಸಿಯಾಗಿದ್ದ ಆಕಾಶ್, ವೇಲು ಎಂಬುವರ ಮಗ. ವೇಲು ಮೇಲಿದ್ದ ದ್ವೇಷಕ್ಕೆ ಸೇಡು ತೀರಿಸಿಕೊಳ್ಳುವುದಕ್ಕಾಗಿ ದುಷ್ಕರ್ಮಿಗಳು ಕೃತ್ಯ ಎಸಗಿ ಪರಾರಿಯಾಗಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಗುತ್ತಿಗೆ ಕೆಲಸಗಳಲ್ಲಿ ಉಸ್ತುವಾರಿ ಮಾಡುತ್ತಿದ್ದ ವೇಲು, ತಮ್ಮದೇ ಪ್ರದೇಶದ ರಾಜವೇಲು ಎಂಬುವರ ಜೊತೆ ಸ್ನೇಹ ಹೊಂದಿದ್ದರು. ಇಬ್ಬರೂ ನಿತ್ಯ ರಾತ್ರಿ ವಿಲ್ಸನ್‌ ಗಾರ್ಡನ್‌ ಬಳಿ ಭೇಟಿಯಾಗುತ್ತಿದ್ದರು. ನಂತರ ಸುತ್ತಾಡಿ ಮನೆಗೆ ವಾಪಸು ಬರುತ್ತಿದ್ದರು.’

‘ಇತ್ತೀಚೆಗೆ ರಾಜವೇಲು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಈ ಬಗ್ಗೆ ವಿಲ್ಸನ್ ಗಾರ್ಡನ್ ಠಾಣೆಯಲ್ಲೂ ಪ್ರಕರಣ ದಾಖಲಾಗಿತ್ತು. ರಾಜವೇಲು ಕೊಲೆಗೆ ವೇಲು ಕಾರಣವೆಂದು ತಿಳಿದಿದ್ದ ಕೆಲ ಸಂಬಂಧಿಕರು, ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು’ ಎಂದೂ ಪೊಲೀಸರು ತಿಳಿಸಿದರು.

ಶೌಚಾಲಯದಲ್ಲಿ ದಾಳಿ: ‘ಠಾಣೆ ವ್ಯಾಪ್ತಿಯಲ್ಲಿರುವ ಸಾರ್ವಜನಿಕರ ಶೌಚಾಲಯವೊಂದಕ್ಕೆ ಬುಧವಾರ ಸಂಜೆ ಆಕಾಶ್ ಬಂದಿದ್ದರು. ಅದೇ ಸಂದರ್ಭದಲ್ಲಿ ಶೌಚಾಲಯಕ್ಕೆ ನುಗ್ಗಿದ್ದ ದುಷ್ಕರ್ಮಿಗಳು, ಆಕಾಶ್ ಜೊತೆ ಜಗಳ ತೆಗೆದಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು, ಚಾಕುವಿನಿಂದ ಇರಿದು ರಾಡ್‌ನಿಂದ ಹೊಡೆದು ಆಕಾಶ್ ಅವರನ್ನು ಕೊಂದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಹೋಗಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ. ಪ್ರತ್ಯಕ್ಷದರ್ಶಿಗಳು ಹಾಗೂ ಕುಟುಂಬಸ್ಥರ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದರು.

ವಿಶೇಷ ತಂಡ: ‘ತಂದೆ ಮೇಲಿನ ದ್ವೇಷಕ್ಕಾಗಿ ಮಗನನ್ನು ಕೊಲೆ ಮಾಡಿರುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT