ಬೆಂಗಳೂರು: ಮನೆಯ ಕೋಣೆಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಹರಿತವಾದ ವಸ್ತುವಿನಿಂದ ಇರಿದು, ಕೊಲೆ ಮಾಡಿರುವ ಘಟನೆ ಚೆನ್ನಮ್ಮನಕೆರೆ ಅಚ್ಚುಕಟ್ಟು ಠಾಣಾ ವ್ಯಾಪ್ತಿಯ ಇಟ್ಟಮಡುವಿನಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಇಟ್ಟಮಡುವಿನ ಮಂಜು (37) ಕೊಲೆಯಾಗಿರುವ ವ್ಯಕ್ತಿ.
‘ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ ಈತ ರೌಡಿಶೀಟರ್ವೊಬ್ಬನ ಸಹೋದರ ಎನ್ನಲಾಗಿದೆ. ಮಂಜು ಮೇಲೆ ದುಷ್ಕರ್ಮಿಗಳ ತಂಡ ದಾಳಿ ಮಾಡಿ ಕೊಲೆ ಮಾಡಿದೆ. ಹರಿತವಾದ ಆಯುಧಗಳಿಂದ ಇರಿದು ಕೊಲೆಗೈದು ಪರಾರಿಯಾಗಿದೆ’ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಣೆಯಲ್ಲಿದ್ದಮಂಜು ಮೃತಪಟ್ಟಿರುವುದನ್ನು ಕುಟುಂಬಸ್ಥರು ಬುಧವಾರ ಬೆಳಿಗ್ಗೆ ನೋಡಿ, ಕೂಡಲೇ ಪೊಲೀಸರಿಗೆ ತಿಳಿಸಿದ್ದಾರೆ. ಹಳೆಯ ದ್ವೇಷದಿಂದ ದುಷ್ಕರ್ಮಿಗಳು ಕೊಲೆ ಮಾಡಿರುಬಹುದು ಎಂದು ಶಂಕಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.