ಬೆಂಗಳೂರು: ‘ನಾಗರಿಕತೆ ಮತ್ತು ಸಂಸ್ಕೃತಿಯ ಸಂಗಮವೇ ಬದುಕು. ಅಂಥ ಬದುಕನ್ನು ಪ್ರತಿಯೊಬ್ಬರೂ ರೂಪಿಸಿಕೊಳ್ಳಬೇಕು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.
ಸರ್ವಮಂಗಳಾ ಸಾಹಿತ್ಯ ಸೇವಾ ಟ್ರಸ್ಟ್ ಭಾನುವಾರ ಇಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಂಸ್ಕೃತಿ ಎನ್ನುವುದು ಪರಂಪರೆ. ಇತಿಹಾಸ ಉಳ್ಳದ್ದು. ನಾಗರಿಕತೆ ಎನ್ನುವುದು ದೈನಂದಿನ ಸೌಲಭ್ಯಗಳಿಗಾಗಿ ಮಾಡಿಕೊಂಡಿರುವ ವ್ಯವಸ್ಥೆ’ ಎಂದರು.
ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ‘ನಗು ಮತ್ತು ಸಮಯ ಜಗತ್ತಿನ ಎರಡು ಅದ್ಭುತಗಳು. ನಗುವಿನಿಂದ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ. ನನ್ನ ಬಳಿ ಬಂದವರಿಗೆ ನಗುತ್ತಾ ಮಾತನಾಡಿಸುತ್ತೇನೆ. ಕೆಲಸ ಆಗದಿದ್ದರೂ ಚಿಂತಿಸುವುದಿಲ್ಲ. ಮಂತ್ರಿಗಳು ಖುಷಿ ಯಿಂದ ಮಾತನಾಡಿದರೂ ಸಾಕು ಎಂದುಕೊಳ್ಳುತ್ತಾರೆ’ ಎಂದರು.
ಐವರು ಸಾಧಕರಿಗೆ ಪ್ರಶಸ್ತಿ: ‘ಸಂಸ್ಕೃತಿ ಸಂಗಮ-2019’ ಪ್ರಶಸ್ತಿಯನ್ನು ಐವರು ಸಾಧಕರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ತಲಾ ₹10 ಸಾವಿರ ನಗದು ಒಳಗೊಂಡಿದೆ.
ಪ್ರಶಸ್ತಿ ಪುರಸ್ಕೃತರು:ವಚನ ಸಾಹಿತ್ಯ- ಸಾಹಿತಿ ಡಾ.ಓ.ಎಲ್. ನಾಗಭೂಷಣಸ್ವಾಮಿ, ದಾಸ ಸಾಹಿತ್ಯ- ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್, ಜನಪದ ಸಾಹಿತ್ಯ- ಕಲಾವಿದೆ ಯಲ್ಲವ್ವ ದುರ್ಗಪ್ಪ ರೊಡ್ಡಪ್ಪನವರ, ಸಂಗೀತ ಕ್ಷೇತ್ರ- ಗಾಯಕ ವೀರೇಶ್ ಕಿತ್ತೂರ, ನೃತ್ಯ- ರಂಗಭೂಮಿ ಕಲಾವಿದೆ ವೈಜಯಂತಿ ಕಾಶಿ.