ಕೆ.ಆರ್.ಪುರ: ದಲಿತರ ಕಾಲೊನಿಗಳಲ್ಲಿ ಮೂಲಸೌಕರ್ಯ ಕಲ್ಪಿಸುವಂತೆ ಒತ್ತಾಯಿಸಿ ಬೆಂಗಳೂರು ಪೂರ್ವ ತಾಲ್ಲೂಕು ಆದಿಜಾಂಬವ ಜನಸಂಘ ಸಮಿತಿಯ ಸದಸ್ಯರು ಮಹದೇವಪುರ ವಲಯ ಜಂಟಿ ಆಯುಕ್ತ ವೆಂಕಟಾ ಚಲಪತಿ ಅವರಿಗೆ ಮನವಿ ಸಲ್ಲಿಸಿದರು.
ಪೂರ್ವ ತಾಲ್ಲೂಕು ಅಧ್ಯಕ್ಷ ವಿ.ಕೃಷ್ಣಮೂರ್ತಿ, ‘ಕೆ.ಆರ್.ಪುರ ಮತ್ತು ಮಹದೇವಪುರ ಕ್ಷೇತ್ರದ ದಲಿತ ಕಾಲೊನಿಗಳು ಮೂಲಸೌಕರ್ಯ ಗಳಿಂದ ವಂಚಿತಗೊಂಡಿವೆ. ಹದಗೆಟ್ಟ ರಸ್ತೆಗಳು, ಚರಂಡಿ, ವಸತಿ, ನೀರು ವ್ಯವಸ್ಥೆ ಸಮರ್ಪಕವಾಗಿಲ್ಲ. ವಾಸಿಸಲು ಯೋಗ್ಯವಾಗಿಲ್ಲ’ ಎಂದರು.
ಪ್ರಧಾನ ಕಾರ್ಯದರ್ಶಿ ಬಿ.ಆರ್.ಮಾದೇಶ್, ‘ಮೂಲಸೌಲಭ್ಯಗಳು ಸಿಗದೆ ಸಮುದಾಯದ ಜನರು ಪರದಾಡುತ್ತಿದ್ದಾರೆ. ಜನಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.
ಸಮಿತಿಯ ಉಪಾಧ್ಯಕ್ಷರಾದ ವೆಂಕಟಸ್ವಾಮಿ, ಚಂದ್ರಶೇಖರ, ಕಾರ್ಯಾಧ್ಯಕ್ಷ ಮುನಿರಾಜು, ಜಂಟಿ ಕಾರ್ಯದರ್ಶಿ ಶಿವಕುಮಾರ್, ಶಶಿಕುಮಾರ್, ರಮೇಶ್ ಇದ್ದರು.