ಬೆಂಗಳೂರು: ತ್ಯಾಜ್ಯ ಆಯುವವರಿಗೆ ಒಪ್ಪಂದ ಪ್ರಕಾರ ಬಿಬಿಎಂಪಿ ನೀಡಬೇಕಾದ ವೇತನವನ್ನು ಒಂದು ವರ್ಷದಿಂದ ನೀಡಿಲ್ಲ ಎಂದು ತ್ಯಾಜ್ಯ ಶ್ರಮಿಕರ ಸಂಘ ಆಗ್ರಹಿಸಿದೆ.
ಒಣತ್ಯಾಜ್ಯ ಸಂಗ್ರಹ ಕೇಂದ್ರಗಳನ್ನು ಬೆಂಗಳೂರಿನಲ್ಲಿ 2011ರಲ್ಲಿ ರಚಿಸಲಾಗಿತ್ತು. ತ್ಯಾಜ್ಯ ಆಯುವವರಿಗೆ ವೃತ್ತಿ ಗುರುತಿನ ಚೀಟಿ ನೀಡಲಾಗಿತ್ತು. ಒಣ, ಹಸಿ ಮತ್ತು ಬೇಡದ ಕಸವನ್ನು ವಾರಕ್ಕೆ ಎರಡು ಬಾರಿ ಪ್ರತ್ಯೇಕವಾಗಿ ಸಂಗ್ರಹಿಸುವಂತೆ 2020ರಲ್ಲಿ ಸುತ್ತೋಲೆ ಹೊರಡಿಸಲಾಗಿತ್ತು. ಆರು ತಿಂಗಳು ಒಣ ತ್ಯಾಜ್ಯ ಸಂಗ್ರಹ ಮಾಡಲು ಒಂದು ಕೇಂದ್ರಕ್ಕೆ ₹56,316 ನೀಡಲು ಬಿಬಿಎಂಪಿ ನಿಗದಿ ಮಾಡಿತ್ತು. ಬಿಬಿಎಂಪಿಯಿಂದ ಕಸ ಸಂಗ್ರಹ ವಾಹನವನ್ನು ನೀಡದೇ ಇದ್ದರೆ ತಿಂಗಳಿಗೆ ₹ 23,316 ವಾಹನ ಬಾಡಿಗೆಯನ್ನು ನೀಡಲಾಗುವುದು ಎಂದು ಬಿಬಿಎಂಪಿ ತಿಳಿಸಿತ್ತು. ಒಣ ತ್ಯಾಜ್ಯ ಸಂಗ್ರಹ ಮಾಡುವವರಿಗೆ ಮಾತ್ರ ಒಂದು ವರ್ಷಕ್ಕೂ ಅಧಿಕ ಸಮಯದಿಂದ ಈ ಹಣವನ್ನು ನೀಡಿಲ್ಲ. ಹಸಿ ಕಸ, ಬೇಡದ ಕಸ ಸಂಗ್ರಹ ಮಾಡುವವರಿಗೆ ಹಣ ಪಾವತಿಯಾಗುತ್ತಿದೆ ಎಂದು ಶ್ರಮಿಕರ ಸಂಘದ ಇಂದಿರಾ, ಮನ್ಸೂರ್, ಕುಮುದಾ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೂಡಲೇ ಹಣವನ್ನು ಪಾವತಿಸಬೇಕು. ಇಲ್ಲದೇ ಇದ್ದರೆ ಬಿಬಿಎಂಪಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ತ್ಯಾಜ್ಯ ಶ್ರಮಿಕರ ಸಂಘ, ಹಸಿರುದಳ, ಸ್ವಚ್ಚ ಪರಿಸರ ಪರಿಹಾರ, ಗಿಲ್ಗಲ್ ಚಾರಿಟಬಲ್ ಟ್ರಸ್ಟ್ನ ಪದಾಧಿಕಾರಿಗಳಾದ ಪರಮೇಶ್, ಅಂಜಲಿ, ಮುರಳಿ, ನದಿಯಾ, ಇಂದುಮತಿ, ಅನಿತಾ, ಗೀತಾ, ನಳಿನಿ ಇದ್ದರು.