ಬೆಂಗಳೂರು: ‘ಪ್ರತಿಯೊಂದು ಕೆಲಸದ ಹಿಂದೆ ಒಂದು ಗುರಿ–ಉದ್ದೇಶವಿರುತ್ತದೆ. ಆ ಗುರಿ ಅರ್ಥವಾದರೆ ಕ್ರಮಿಸುವ ದಾರಿ ಸುಗಮವಾಗುತ್ತದೆ’ ಎಂದು ನಾರಾಯಣ ಆರೋಗ್ಯ ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಡಾ. ದೇವಿ ಪ್ರಸಾದ್ ಶೆಟ್ಟಿ ಹೇಳಿದರು.
ಜೈನ್ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿದ್ದ ಪದವಿ ವಿದ್ಯಾರ್ಥಿಗಳ ವಾರ್ಷಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
‘ಈ ಪ್ರಪಂಚವನ್ನು ಮತ್ತಷ್ಟು ಉತ್ತಮಗೊಳಿಸುವುದು ನಿಮ್ಮ ಜೀವನದ ಮುಖ್ಯ ಉದ್ದೇಶವೆಂದು ನಿರ್ಧಾರ ಮಾಡಿದರೆ, ಯಾವುದೇ ಪ್ರತಿಕೂಲ ಶಕ್ತಿಯೂ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ’ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಚೆನ್ರಾಜ್ ರಾಯ್ಚಂದ್, ‘ಪದವೀಧರರಾಗುವುದು ಮತ್ತು ಇಂತಹ ಸಮಾವೇಶಗಳಲ್ಲಿ ಭಾಗವಹಿಸುವುದು ವಿದ್ಯಾರ್ಥಿಗಳ ಜೀವನದಲ್ಲಿ ಪರಿವರ್ತನೆಯ ಮತ್ತು ಅವಿಸ್ಮರಣೀಯ ಕ್ಷಣಗಳು’ ಎಂದರು.
‘ಕೋವಿಡ್ ನಮ್ಮ ಮುಂದೆ ಹೆಚ್ಚಿನ ಸವಾಲುಗಳನ್ನು ತಂದಿದೆ. ಆದರೆ ನಾವು ಎಲ್ಲರೂ ಒಟ್ಟಾಗಿ ಹೆಜ್ಜೆ ಹಾಕುತ್ತಾ, ಒಬ್ಬರು ಇನ್ನೊಬ್ಬರಿಗೆ ಬೆಂಬಲ ನೀಡುತ್ತಾ ಸಾಗಿದ್ದರ ಫಲವಾಗಿ ಈ ಸವಾಲನ್ನು ಸುಲಭವಾಗಿ ಜಯಿಸಿದ್ದೇವೆ’ ಎಂದರು.
5,098 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ವಿವಿಧ ವಿಷಯಗಳಲ್ಲಿ ಹೆಚ್ಚು ಅಂಕಗಳಿಸಿದ 78 ವಿದ್ಯಾರ್ಥಿಗಳಿಗೆ ಚಿನ್ನದ ಪದಕಗಳನ್ನು ನೀಡಲಾಯಿತು.