ಬೆಂಗಳೂರು:ಕರ್ನಾಟಕ ರಾಜ್ಯ ಡಯಾಲಿಸಿಸ್ ನೌಕರರ ಸಂಘದ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಡಯಾಲಿಸಿಸ್ ಸಿಬ್ಬಂದಿ ಕೈಗೊಂಡಿದ್ದ ಮುಷ್ಕರ ಅಂತ್ಯಕೊಂಡಿದೆ.
ವೇತನ ಪಾವತಿ ಸಮಸ್ಯೆ ನಿವಾರಣೆ,ಕಾರ್ಮಿಕರ ಆರೋಗ್ಯ ವಿಮೆ (ಇಎಸ್ಐ) ಮತ್ತು ಭವಿಷ್ಯ ನಿಧಿಗೆ (ಪಿಎಫ್) ಹಣ ಪಾವತಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಿಬ್ಬಂದಿಗುರುವಾರ ಮುಷ್ಕರ ಕೈಗೊಂಡಿದ್ದರು.
ಶುಕ್ರವಾರ ರಾತ್ರಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಸಿಬ್ಬಂದಿ ಹಾಗೂ ಸಂಜೀವಿನಿ ಸಂಸ್ಥೆಯ ಪ್ರತಿನಿಧಿಗಳ ಜತೆಗೆ ಸಭೆ ನಡೆಸಿದರು. ಬೇಡಿಕೆಗಳ ಬಗ್ಗೆ ಸಕಾರಾತ್ಮಕ ಸ್ಪಂದನ ದೊರೆತಿದ್ದರಿಂದಮುಷ್ಕರ ಹಿಂತೆಗೆದುಕೊಳ್ಳುವುದಾಗಿ ಸಿಬ್ಬಂದಿ ಪ್ರತಿನಿಧಿಗಳು ಪ್ರಕಟಿಸಿದರು.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿನ ಡಯಾಲಿಸಿಸ್ ಘಟಕಗಳನ್ನು ಬಿಆರ್ಎಸ್ ಏಜೆನ್ಸಿ ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂಬ ಕಾರಣಕ್ಕೆ ಸಂಸ್ಥೆ ಜತೆಗಿನ ಒಪ್ಪಂದವನ್ನು ಆರೋಗ್ಯ ಇಲಾಖೆ ಕಳೆದ ವರ್ಷ ರದ್ದು ಮಾಡಿತ್ತು. ರಾಜ್ಯದ ಎಲ್ಲ ಡಯಾಲಿಸಿಸ್ ಘಟಕಗಳ ನಿರ್ವಹಣೆಯನ್ನು ಈಗ ಸಂಜೀವಿನಿ ಸಂಸ್ಥೆಗೆ ಹೊರಗುತ್ತಿಗೆ ನೀಡಲಾಗಿದೆ.
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ 120 ಡಯಾಲಿಸಿಸ್ ಘಟಕಗಳಿದ್ದು, 650ಕ್ಕೂ ಅಧಿಕ ಸಿಬ್ಬಂದಿ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದಾರೆ.