ದಾಬಸ್ ಪೇಟೆ: ಶಿವಗಂಗೆ ಸರ್ಕಾರಿ ಕಿರಿಯ ಪ್ರಾಥಮಿಕಪಾಠಶಾಲೆಯ ಮಕ್ಕಳು ಮತ್ತು ಶಿಕ್ಷಕರು ಪರಿಸರ ಸಂರಕ್ಷಿಸುವ ಕಾಳಜಿಯೊಂದಿಗೆ ‘ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
‘ಪರಿಸರ ರಕ್ಷಣೆ ಸರ್ಕಾರದ, ಸ್ಥಳೀಯ ಆಡಳಿತದ ಜವಾಬ್ದಾರಿ ಎಂಬ ಮನೋಭಾವದಿಂದ ಪ್ರತಿಯೊಬ್ಬರೂ ಹೊರಬಂದು, ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು ಪರಿಸರದ ರಕ್ಷಣೆಗೆ ಮುಂದಾಗಬೇಕು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಹೊನ್ನಗಂಗಶೆಟ್ಟಿ ಹೇಳಿದರು.
‘ಅದರಲ್ಲೂ ಮಕ್ಕಳು ಈಗಿನಿಂದಲೇ ಈ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಭವಿಷ್ಯದ ದಿನಗಳು ಆಶಾದಾಯಕವಾಗಿ ಇರಲಿವೆ’ ಎಂದು ಅವರು ಹೇಳಿದರು.
ಶಾಲೆಯ ಶಿಕ್ಷಕಿ ಭಾರತಮ್ಮ ಮಾತನಾಡಿ, ‘ಪ್ಲಾಸ್ಟಿಕ್ ಇವತ್ತು ಪರಿಸರಕ್ಕೆ ಮಾರಕವಾಗಿದೆ. ಭೂಮಿಯಲ್ಲಿ ಕೊಳೆಯದ ಇದು, ಸುಟ್ಟಾಗ ಅನೇಕ ವಿಷಕಾರಕ ಅಂಶಗಳನ್ನು ಪರಿಸರಕ್ಕೆ ಬಿಡುಗಡೆ ಮಾಡುತ್ತದೆ. ಇದರಿಂದ ಆರೋಗ್ಯಕ್ಕೆ ಮಾರಕವಾಗಿದೆ’ ಎಂದರು.
ಮಕ್ಕಳು ಹಾಗೂ ಶಿಕ್ಷಕರು ಗ್ರಾಮದ ಬೀದಿ ಬೀದಿಗಳಲ್ಲಿ ಜಾಥಾ ನಡೆಸಿದರು.