ಬೆಂಗಳೂರು: ಜಿಲ್ಲೆ ಮತ್ತು ರಾಜ್ಯಗಳ ವಿಭಜನೆಯಿಂದ ಅಭಿವೃದ್ಧಿಯಾಗುವುದು ಎನ್ನುತ್ತಾ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರನ್ನು ವಂಚಿಸುತ್ತಿವೆ ಎಂದು ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದ) ಖಂಡಿಸಿದೆ.
ಸಿಪಿಐಎಂ ರಾಜ್ಯ ಘಟಕದ ಕಾರ್ಯದರ್ಶಿ ಯು.ಬಸವರಾಜ,‘ರಾಜ್ಯದಲ್ಲಿ ಬಳ್ಳಾರಿಯನ್ನು ವಿಭಜಿಸಿ, ವಿಜಯನಗರ ಜಿಲ್ಲೆ ರಚಿಸುವ ಪ್ರಸ್ತಾವ ಎದ್ದಿದೆ. ವಿಭಜನೆ ಪ್ರಸ್ತಾವ ಬಿಜೆಪಿಯೊಳಗೆ ಭುಗಿಲೆದ್ದಿರುವ ಅಸಮಾಧಾನವನ್ನು ಶಮನ ಮಾಡುವ ಮತ್ತು ಅಧಿಕಾರ ಉಳಿಸಿಕೊಳ್ಳುವ ಕುತಂತ್ರವೇ ಹೊರತು, ಜನರ ಕಾಳಜಿಯಲ್ಲ’ ಎಂದು ಟೀಕಿಸಿದ್ದಾರೆ.
‘ಇಂತಹ ವಿಭಜನೆ ಕೇವಲ ಭೂಮಾಲೀಕರು ಮತ್ತು ಬಂಡವಾಳದಾರರಿಗೆ ಜಿಲ್ಲಾ ಉಸ್ತುವಾರಿಗಳು, ಮಂತ್ರಿಗಳಾಗಲು ಮಾತ್ರ ನೆರವಾಗುತ್ತದೆ' ಎಂದು ತಿಳಿಸಿದ್ದಾರೆ.
‘ಕೊರಮ–ಕೊರಚ ಅಭಿವೃದ್ಧಿ ನಿಗಮಕ್ಕೆ ₹50 ಕೋಟಿ ಕೊಡಿ’
ಬೆಂಗಳೂರು: ಅಲೆಮಾರಿಗಳಿಗಾಗಿ ಅಭಿವೃದ್ಧಿ ನಿಗಮ ರಚಿಸಬೇಕು ಎಂದು ಅಖಿಲ ಕರ್ನಾಟಕ ಕುಳುವ ಮಹಾಸಂಘ ಒತ್ತಾಯಿಸಿದೆ.
‘15 ಲಕ್ಷ ಜನಸಂಖ್ಯೆ ಹೊಂದಿರುವ ಅಲೆಮಾರಿ ಕೊರಮ, ಕೊರಚ, ಕೊರವ, ಕುರವನ್, ಕೇಪ್ ಮಾರಿಷ್ ಸಮುದಾಯಗಳ ಅಭಿವೃದ್ಧಿಗೆ ನಿಗಮ ಸ್ಥಾಪಿಸಿ, ₹50 ಕೋಟಿ ಅನುದಾನ ನಿಗದಿಗೊಳಿಸಬೇಕು’ ಎಂದು ಸಂಘದ ರಾಜ್ಯಘಟಕದ ಅಧ್ಯಕ್ಷ ಆನಂದಪ್ಪ ಒತ್ತಾಯಿಸಿದ್ದಾರೆ.
‘ನಿಗಮ ಸ್ಥಾಪಿಸುವುದಾಗಿ ಆಗಿನ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಘೋಷಿಸಿ, ₹5 ಕೋಟಿ ತೆಗೆದಿರಿಸಿದ್ದರು. ಇದನ್ನು ಈಗಿನ ಉಪಮುಖ್ಯಮಂತ್ರಿಗೋವಿಂದ ಎಂ. ಕಾರಜೋಳ ಅವರು, ಈ ನಿಗಮ ಸ್ಥಾಪನೆಯ ಅವಶ್ಯಕತೆ ಇಲ್ಲ ಎಂದು 2019ರಲ್ಲಿ ಹಿಂಬರಹ ನೀಡಿದರು. ಇದು ತಾರತಮ್ಯ’ ಎಂದು ಅವರು ದೂರಿದರು.