ಕೆಂಗೇರಿ: ‘ಸ್ವಂತ ಸೂರಿಲ್ಲದೆ ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ವಾಸ ಮಾಡುತ್ತಿರುವ ಅರ್ಹ ಫಲಾನುಭವಿಗಳಿಗೆ ವಸತಿ ಸೌಲಭ್ಯ ಒದಗಿಸಲು ಸರ್ಕಾರ ಬದ್ಧವಾಗಿದೆ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.
ಯಶವಂತಪುರ ವಿಧಾನ ಸಭಾ ಕ್ಷೇತ್ರ, ಉಲ್ಲಾಳು ವಾರ್ಡಿನ ಸರ್ಕಾರಿ ಶಾಲಾ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 159 ಮಂದಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿ ಅವರು ಮಾತನಾಡಿದರು.
‘ಎಲ್ಲ ಅರ್ಹ ವಸತಿರಹಿತರಿಗೆ ಹಕ್ಕುಪತ್ರ ವಿತರಿಸಲಾಗುತ್ತಿದೆ. ಕ್ಷೇತ್ರದಲ್ಲಿ ಹಲವಾರು ಮಂದಿ ವಸತಿ ರಹಿತರಿದ್ದಾರೆ. ಹಲವಾರು ಸಮಸ್ಯೆಗಳನ್ನು ಎದುರಿಸುವ ಜೊತೆಗೆ ವಸತಿ ಭದ್ರತೆ ಕೊರತೆಯಿಂದ ಭ್ರಮನಿರಸನಕ್ಕೊಳಗಾದವರಿಗೆ ಹಕ್ಕು ಪತ್ರದ ಒಡೆತನವು ಹೊಸ ಬೆಳಕನ್ನು ಮೂಡಿಸಲಿದೆ’ ಎಂದು ಹೇಳಿದರು.