ಬೆಂಗಳೂರು: ‘ಆರ್.ಆರ್. ನಗರದ ಪಕ್ಷದ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ಐಆರ್ ದಾಖಲಿಸಿರುವುದು ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ; ನೀಚ ರಾಜಕಾರಣ. ಅಧಿಕಾರದ ದುರ್ಬಳಕೆ. ಇದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದರು.
ಸದಾಶಿವನಗರದಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ತುರ್ತು ಸುದ್ದಿಗೋಷ್ಠಿ ನಡೆಸಿದ ಅವರು, ‘ಚುನಾವಣೆಗೆ ಅಡ್ಡಿಪಡಿಸುವ ಯತ್ನವಿದು. ರಾಜ್ಯ ಸರ್ಕಾರದ ಈ ನಡೆ ಖಂಡನೀಯ’ ಎಂದೂ ಕಿಡಿಕಾರಿದರು.
‘ನಮ್ಮ ಪಕ್ಷದ ಕಾರ್ಯಕರ್ತರಿಗೆ ಬಿಜೆಪಿ ಬೆದರಿಕೆ ಒಡ್ಡುತ್ತಿದೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಕೊಡುತ್ತೇವೆ. ಸೇಡಿನ, ಹೇಡಿತನದ ರಾಜಕಾರಣವಿದು. ಇದಕ್ಕೆಲ್ಲಾ ಕಾಂಗ್ರೆಸ್ ಜಗ್ಗುವುದಿಲ್ಲ. ತಾಕತ್ತಿದ್ದರೆ ಸಿದ್ದರಾಮಯ್ಯ ವಿರುದ್ಧ ಕೇಸ್ ದಾಖಲಿಸಿ’ ಎಂದು ಸವಾಲು ಹಾಕಿದರು.
‘ಬುಧವಾರ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಯಾರೆಲ್ಲಾ 100 ಮೀಟರ್ ಒಳಗಿದ್ದರೋ ಅವರೆಲ್ಲರ ವಿರುದ್ಧ ಕೇಸ್ ದಾಖಲಿಸಬೇಕು. ಸಚಿವರು, ಶಾಸಕರೂ ಇದ್ದರು. ಒಬ್ಬೊಬ್ಬರಿಗೊಂದು ನ್ಯಾಯ, ಕಾನೂನಾ’ ಎಂದೂ ಆಕ್ರೋಶ ವ್ಯಕ್ತಪಡಿಸಿದರು.
‘ಸಮಯ ನಿಗದಿಪಡಿಸಿಕೊಂಡೇ ನಾಮಪತ್ರ ಸಲ್ಲಿಸಿದ್ದೇವೆ. ಇಂಥ ಕ್ರಮದ ಬಗ್ಗೆ ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕು. ಎಫ್ಐಆರ್ ದಾಖಲಿಸಿದ ಇನ್ಸ್ಪೆಕ್ಟರ್ನ್ನು ಅಮಾನತು ಮಾಡಬೇಕು’ ಎಂದೂ ಶಿವಕುಮಾರ್ ಒತ್ತಾಯಿಸಿದರು.