ಕೋವಿಡ್ ಪರೀಕ್ಷೆಯ ಮಹತ್ವದ ಬಗ್ಗೆ ಮಾತನಾಡಿರುವ ಅವರು, ‘ಹಲವರು ತಪ್ಪು ಕಲ್ಪನೆಯಿಂದ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡರೂ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಇದರಿಂದ ಅವರ ಜತೆಗಿನ ಕುಟುಂಬದ ಸದಸ್ಯರಿಗೂ ಅಪಾಯ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಜ್ವರ, ಕೆಮ್ಮು, ಶೀತ ಸೇರಿದಂತೆ ವಿವಿಧ ಲಕ್ಷಣಗಳು ಕಾಣಿಸಿಕೊಂಡಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜ್ವರ ಚಿಕಿತ್ಸಾಲಯಗಳ ಜತೆಗೆ ಮೊಬೈಲ್ ವ್ಯಾನ್ ಮೂಲಕ ಕೂಡ ಉಚಿತವಾಗಿ ಪರೀಕ್ಷೆ ನಡೆಸಲಾಗುತ್ತಿದೆ. ಕಂಟೈನ್ಮೆಂಟ್ ಪ್ರದೇಶ, ಕೊಳೆಗೇರಿ ಪ್ರದೇಶ ಸೇರಿದಂತೆ ಹೆಚ್ಚಿನ ಅಪಾಯ ಇರುವ ಪ್ರದೇಶಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡುತ್ತಿದ್ದೇವೆ. ಆ್ಯಂಟಿಜೆನ್ ಪರೀಕ್ಷೆಯಲ್ಲಿ ಅರ್ಧಗಂಟೆಯಲ್ಲಿಯೇ ವರದಿ ಬರಲಿದೆ. ಲಕ್ಷಣಗಳು ಇರುವ ವ್ಯಕ್ತಿ ಸೋಂಕಿತನಾಗಿಲ್ಲ ಎಂಬ ವರದಿ ಬಂದಲ್ಲಿ ಎರಡನೇ ಬಾರಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.