ಬೆಂಗಳೂರು: ಸುಮನಹಳ್ಳಿ ಬಸ್ ತಂಗುದಾಣ ಬಳಿ ಗಾಂಜಾ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ಲಗ್ಗೆರೆ ಚೌಡೇಶ್ವರಿನಗರದ ವಿನೋದ್ಕುಮಾರ್ ಅಲಿಯಾಸ್ ಸೊಳ್ಳೆ (28) ಹಾಗೂ ಶಂಕರ್ (22) ಬಂಧಿತರು. ಇವರಿಬ್ಬರಿಂದ ₹ 90 ಸಾವಿರ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.
‘ನ. 20ರಂದು ಸುಮನಹಳ್ಳಿ ಬಸ್ ತಂಗುದಾಣ ಬಳಿ ಬಂದಿದ್ದ ಆರೋಪಿಗಳು, ಗಾಂಜಾ ಮಾರಲು ಯತ್ನಿಸುತ್ತಿದ್ದರು. ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ, ಆರೋಪಿಗಳ ಬ್ಯಾಗ್ ಪರಿಶೀಲಿಸಲಾಯಿತು. ಅದೇ ಬ್ಯಾಗ್ನಲ್ಲಿ ಗಾಂಜಾ ಪತ್ತೆಯಾಯಿತು’ ಎಂದು ತಿಳಿಸಿದರು.
‘ಡ್ರಗ್ಸ್ ಪೆಡ್ಲರ್ ವಿನಾಯಕ್ ಅಲಿಯಾಸ್ ಆರ್.ಬೆಟ್ಟು ಹಾಗೂ ಸೆಲ್ವಿಯಮ್ಮ ಎಂಬುವರ ಬಳಿ ಆರೋಪಿಗಳು ಗಾಂಜಾ ಖರೀದಿಸಿ ತರುತ್ತಿದ್ದರು. ಅದನ್ನೇ ಕೆಲ ಕಾಲೇಜು ವಿದ್ಯಾರ್ಥಿಗಳು, ಕೆಲ ಖಾಸಗಿ ಕಂಪನಿ ಉದ್ಯೋಗಿಗಳು ಹಾಗೂ ಇತರರಿಗೆ ಮಾರುತ್ತಿದ್ದರು. ತಲೆಮರೆಸಿಕೊಂಡಿರುವ ವಿನಾಯಕ್ ಹಾಗೂ ಸೆಲ್ವಿಯಮ್ಮ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ಹೇಳಿದರು.