ಬೆಂಗಳೂರು: ನೈಸ್ ರಸ್ತೆಯ ಬನ್ನೇರುಘಟ್ಟ ಸೇತುವೆ ಬಳಿ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಭರತ್ (18) ಎಂಬುವರು ಮೃತಪಟ್ಟಿದ್ದು, ಅವರ ಸ್ನೇಹಿತ ಲೋಕೇಶ್ (21) ಗಾಯಗೊಂಡಿದ್ದಾರೆ.
ಚಂದಾಪುರ ನಿವಾಸಿಯಾದ ಭರತ್, ಕುಮಾರಕೃಪಾ ರಸ್ತೆಯ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಗೌಡನಪಾಳ್ಯದ ಲೋಕೇಶ್, ಭಾನುವಾರ ನಸುಕಿನಲ್ಲಿ (ಸಮಯ 2.30) ಭರತ್ ಅವರ ಕಂಪನಿ ಹತ್ತಿರ ಹೋಗಿದ್ದರು. ಅಲ್ಲಿಂದ ಇಬ್ಬರೂ ನೈಸ್ ರಸ್ತೆ ಮಾರ್ಗವಾಗಿ ಕಾರಿನಲ್ಲಿ ಚಂದಾಪುರಕ್ಕೆ ತೆರಳುತ್ತಿದ್ದರು.
ವೇಗವಾಗಿ ಚಾಲನೆ ಮಾಡಿಕೊಂಡು ಬಂದಿರುವ ಲೋಕೇಶ್, ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದ್ದಾರೆ. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು, ವಿಭಜಕಕ್ಕೆ ಡಿಕ್ಕಿಯಾಗಿ ಮಗುಚಿ ಬಿದ್ದಿದೆ. ಇತರೆ ವಾಹನಗಳ ಸವಾರರು ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಮಾರ್ಗಮಧ್ಯೆಯೇ ಭರತ್ ಕೊನೆಯುಸಿರೆಳೆದಿದ್ದು, ಲೋಕೇಶ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹುಳಿಮಾವು ಸಂಚಾರ ಪೊಲೀಸರು ತಿಳಿಸಿದ್ದಾರೆ.