ಕೆಂಗೇರಿ: ‘ಸಂಘಟನೆಗೆ ಸೇರ್ಪಡೆಗೊಂಡರೆ ಸಾಲದು. ಸಂಘದ ಧ್ಯೇಯೋದ್ದೇಶಗಳ ಬಗ್ಗೆ ನಿಜವಾದ ಕಾಳಜಿ ಹೊಂದಿ ಕಾರ್ಯ ಪ್ರವೃತ್ತರಾಗಬೇಕು’ ಎಂದು ಬೆಂಗಳೂರು ನಗರ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಎನ್ನೆಸ್ಸೆಸ್ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಭಾವೈಕ್ಯತಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳನ್ನು ಸಂಘಟನೆಗೆ ಸೆಳೆಯುವ ಮೂಲಕ ರಾಷ್ಟ್ರೀಯ ಏಕತೆಗೆ ಮತ್ತಷ್ಟು ಬಲ ತುಂಬುವಂತೆ ಮನವಿ ಮಾಡಿದರು.
ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್, ‘ಎಲ್ಲಾ ಭಾಷೆಗಳಿಗೂ ಪ್ರಾಧಾನ್ಯತೆ ನೀಡುವ ಜೊತೆಗೆ ನಮ್ಮ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಬರುವುದೇ ನಿಜವಾದ ರಾಷ್ಟ್ರೀಯತೆ’ ಎಂದು ತಿಳಿಸಿದರು.
ಪ್ರೊ.ಸಿದ್ದಲಿಂಗಯ್ಯ ಮಾತನಾಡಿ, ‘ಸಮಾಜಕ್ಕೆ ಬಾಬಾ ಆಮ್ಟೆ, ಮದರ್ ತೆರೆಸಾ ಅವರಂತಹ ಸಾಮಾಜಿಕ ಹರಿಕಾರರು ಮಾದರಿಯಾಗಬೇಕಿದೆ. ರಾಜಕಾರಣಿಗಳು, ಬಂಡವಾಳಶಾಹಿಗಳು, ಚಲನಚಿತ್ರನಟರಲ್ಲ’ ಎಂದರು.