‘ಹಿಂದುಳಿದ ವರ್ಗಗಳ ರಾಜಕೀಯ ಮೀಸಲಾತಿಗೆಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ 2010ರಲ್ಲಿ, ಕೃಷ್ಣಮೂರ್ತಿ ಹಾಗೂ ಭಾರತ ಒಕ್ಕೂಟ ಸರ್ಕಾರ ಪ್ರಕರಣದಲ್ಲಿ ರಾಜಕೀಯವಾಗಿ ಹಿಂದುಳಿದ ವರ್ಗಗಳನ್ನು ಗುರುತಿಸುವಲ್ಲಿ ಪ್ರಾಯೋಗಿಕ ದತ್ತಾಂಶಗಳನ್ನು ಸಂಗ್ರಹಿಸಿ, ಕಟ್ಟುನಿಟ್ಟಿನ ವಿಶ್ಲೇಷಣೆಗೆ ಒಳಪಡಿಸಿ, ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಬೇಕು ಎಂದು ತೀರ್ಪು ನೀಡಿದೆ. 12 ವರ್ಷಗಳ ನಂತರ ಕರ್ನಾಟಕ ಸರ್ಕಾರ ಸ್ಥಳೀಯ ನಗರ ಮತ್ತು ಪಂಚಾಯತ್ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಅವಕಾಶವಾಗುವಂತೆ ರಾಜಕೀಯವಾಗಿ ಹಿಂದುಳಿದವರನ್ನು ಗುರುತಿಸಲು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಭಕ್ತವತ್ಸಲ ಅಧ್ಯಕ್ಷತೆಯ ಆಯೋಗವೊಂದನ್ನು ರಚಿಸಿ, ಮೂರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಸರ್ಕಾರಕ್ಕೆ ವರದಿ ನೀಡಬೇಕೆಂದು ತಾಕೀತು ಮಾಡಿತು. ಸರ್ಕಾರ ನೀಡಿರುವ ಈ ಕಾಲಾವಧಿಯಿಂದಲೇ ಹಿಂದುಳಿದ ವರ್ಗಗಳ ಬಗ್ಗೆ ಅದಕ್ಕಿರುವ 'ಬದ್ಧತೆ' ಏನೆಂದು ಅರ್ಥವಾಗುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.