ದಾಬಸ್ ಪೇಟೆ: ವಿದ್ಯುತ್ ಬಿಲ್ ಪಾವತಿಸದ ಕಾರಣ ನೆಲಮಂಗಲ ತಾಲ್ಲೂಕು ನರಸೀಪುರ ಪಂಚಾಯಿತಿಯ ಹಾಲೇನಹಳ್ಳಿ ಗ್ರಾಮದ ಶುದ್ಧ ಕುಡಿಯುವ ನೀರಿನ ಘಟಕ ಎರಡನೇ ಬಾರಿಗೆ ಸ್ಥಗಿತಗೊಂಡಿದೆ. ಶುದ್ಧ ಕುಡಿಯುವ ನೀರಿಗಾಗಿ ಜನರು 2 ತಿಂಗಳಿಂದ ಪರದಾಡುತ್ತಿದ್ದಾರೆ.
ಸಮುದಾಯ ಶುದ್ಧ ಕುಡಿಯುವ ನೀರಿನ ಯೋಜನೆಯಡಿ ಮಾರುತಿ ಸುಜುಕಿ ಕಂಪನಿ ಈ ಘಟಕವನ್ನು ಕಟ್ಟಿಸಿಕೊಟ್ಟಿದೆ. ವಾಟರ್ ಲೈಫ್ ಇಂಡಿಯಾ ನಿರ್ವಹಣೆಯ ಜವಾಬ್ದಾರಿ ಹೊತ್ತಿದೆ. ಸೆಪ್ಟೆಂಬರ್ 2018ರಲ್ಲಿ ಘಟಕ ಉದ್ಘಾಟನೆಗೊಂಡಿತ್ತು. ಆಗಲೂ ಹಲವು ದಿನ ನೀರು ಬಂದಿರಲಿಲ್ಲ.
‘ಈಗ ₹ 12,741 ಬಿಲ್ ಕಟ್ಟಬೇಕಾ ಗಿದೆ. ಇದಕ್ಕಾಗಿ ಸಂಪರ್ಕ ಕಡಿತಗೊಳಿಸಿದ್ದೇವೆ. ಘಟಕ ನಿರ್ವಹಿಸುತ್ತಿರುವವರು ನೀರಿಗೆ ಹಣ ಪಡೆಯುತ್ತಾರೆ. ಆದ್ದರಿಂದ, ವಿದ್ಯುತ್ ಬಿಲ್ ಕಟ್ಟಬೇಕು. ಹಣ ಕಟ್ಟಿದ ಕೂಡಲೇ ಸಂಪರ್ಕ ಕೊಡುತ್ತೇವೆ’ ಎಂದು ಬೆಸ್ಕಾಂ ಸಹಾಯಕ ಎಂಜಿನಿಯರ್ ಹನುಮಂತರಾಜು ತಿಳಿಸಿದರು.
ವಾಟರ್ ಲೈಫ್ ಇಂಡಿಯಾದ ಅಧಿಕಾರಿ ಶಿವಕುಮಾರ್, ’ಕೆಲ ದಿನಗಳಲ್ಲಿ ವಿದ್ಯುತ್ ಬಾಕಿ ಪಾವತಿಸಿ, ಘಟಕದಿಂದ ಗ್ರಾಮಸ್ಥರಿಗೆ ನೀರು ದೊರೆಯುವಂತೆ ಮಾಡಲಾಗುವುದು’ ಎಂದು ತಿಳಿಸಿದರು.