ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 150 ಕೋಟಿ ಸಾಲ ಕೊಡಿಸುವ ಆಮಿಷ; ಉದ್ಯಮಿಗೆ ₹4.25 ಕೋಟಿ ವಂಚನೆ

ಕೆ.ಪಿ. ಅಗ್ರಹಾರ ಠಾಣೆಯಲ್ಲಿ ಎಫ್‌ಐಆರ್‌
Last Updated 13 ಜನವರಿ 2020, 20:06 IST
ಅಕ್ಷರ ಗಾತ್ರ

ಬೆಂಗಳೂರು: ₹ 150 ಕೋಟಿ ಸಾಲ ಕೊಡಿಸುವ ಆಮಿಷವೊಡ್ಡಿ ಶುಲ್ಕದ ಹೆಸರಿನಲ್ಲಿ ನಗರದ ಉದ್ಯಮಿಯೊಬ್ಬರಿಂದ ₹ 4.25 ಕೋಟಿ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಕೆ.ಪಿ.ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ವಂಚನೆಗೀಡಾಗಿರುವ ಉದ್ಯಮಿ ಎಚ್‌.ರವೀಂದ್ರ ಎಂಬುವರು ದೂರು ನೀಡಿದ್ದಾರೆ. ಆರೋಪಿಗಳಾದ ಚೆನ್ನೈನ ಹರಿಗೋಪಾಲ್ ಕೃಷ್ಣನ್ ನಾಡರ್, ರಂಜನ್, ಮುಬಾರಕ್, ರಂಜಿತ್ ಫಣಿಕರ್ ಹಾಗೂ ಅಭಿಷೇಕ್ ಗುಪ್ತಾ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ’ ಎಂದು ಪೊಲೀಸರು ಹೇಳಿದರು.

‘ರವೀಂದ್ರ ಅವರಿಗೆ ಲೇಔಟ್‌ ವಿಚಾರದಲ್ಲಿ ಹಣದ ಅವಶ್ಯಕತೆ ಇತ್ತು. ಈ ಬಗ್ಗೆ ಸ್ನೇಹಿತರ ಜೊತೆ ಚರ್ಚಿಸಿದ್ದರು. ಅವರ ಮೂಲಕವೇಹರಿಗೋಪಾಲ್ ಕೃಷ್ಣನ್ ನಾಡರ್ ಅವರ ಪರಿಚಯ ಆಗಿತ್ತು. ಕಡಿಮೆ ಬಡ್ಡಿ ದರದಲ್ಲಿ ₹150 ಕೋಟಿ ಸಾಲ ಕೊಡಿಸುವುದಾಗಿ ಅವರು ಹೇಳಿದ್ದರು’ ಎಂದರು.

‘ಕೇರಳದ ತೊಡುಪುಲ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಕರಾರುಪತ್ರ ಮಾಡಿಸಿದ್ದ ಆರೋಪಿಗಳು, ಅದರ ಶುಲ್ಕವೆಂದು ರವೀಂದ್ರ ಅವರಿಂದ ₹ 3.25 ಕೋಟಿ ಪಡೆದುಕೊಂಡಿದ್ದರು. ಬಳಿಕವೂ ಶುಲ್ಕವೆಂದು ₹1 ಕೋಟಿ ಪಡೆದುಕೊಂಡಿದ್ದರು. ಇದಾದ ಬಳಿಕವೂ ಚೆಕ್‌ ಸಹ ಪಡೆದುಕೊಂಡಿದ್ದಾರೆ. ಈ ಬಗ್ಗೆ ರವೀಂದ್ರ ಅವರು ದೂರಿನಲ್ಲಿ ತಿಳಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ವ್ಯವಸ್ಥಿತ ಜಾಲ ರೂಪಿಸಿಕೊಂಡೇ ಆರೋಪಿಗಳು ರವೀಂದ್ರ ಅವರನ್ನು ವಂಚಿಸಿದ್ದಾರೆ. ಅವರೆಲ್ಲರನ್ನೂ ವಿಚಾರಣೆಗೆ ಒಳಪಡಿಸಬೇಕಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT